ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೋಖ್ರಾನ್‌ ಅಣ್ವಸ್ತ್ರ ಪರೀಕ್ಷೆ ಯಶಸ್ಸಿನ ಹಿಂದೆ ವಾಜಪೇಯಿ ನಿರ್ಧಾರದ ಬಲ

Last Updated 16 ಆಗಸ್ಟ್ 2018, 15:15 IST
ಅಕ್ಷರ ಗಾತ್ರ

ಗೂಢಚಾರಿಕೆ ನಡೆಸುತ್ತಿದ್ದ ಅಮೆರಿಕದ ಸ್ಯಾಟಲೈಟ್‌ ಕ್ಯಾಮೆರಾಗಳ ಕಣ್ತಪ್ಪಿಸಿಪೋಖ್ರಾನ್‌ ನೆಲದಲ್ಲಿ ಅಣ್ವಸ್ತ್ರ ಪರೀಕ್ಷೆ ನಡೆಸಲು ಭಾರತದ ವಿಜ್ಞಾನಿಗಳು, ಯೋಧರು ಹಗಲಿರುಳು ಶ್ರಮಿಸುತ್ತಿದ್ದರು. ಈ ಮಹಾನ್‌ ಕಾರ್ಯಕ್ಕೆ ರಾಜಕೀಯ ಇಚ್ಛಾಶಕ್ತಿ ಅತ್ಯಗತ್ಯವಾಗಿತ್ತು. ಅತ್ಯಂತ ರಹಸ್ಯವಾಗಿ ನಡೆದ ಪೋಖ್ರಾನ್‌ ಕಾರ್ಯಾಚರಣೆಗೆ ಅಂದಿನ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಪ್ರೇರಕ ಶಕ್ತಿಯಾಗಿ ನಿಂತರು.

ರಾಜಸ್ಥಾನದ ಮರಳುಗಾಡಿನ ಬೇಸಿಗೆಯ ಅತ್ಯಂತ ಕಠಿಣ ಸಮಯ, 1998ರ ಮೇ 11ರಂದು ಮಧ್ಯಾಹ್ನ 3:45ಕ್ಕೆ ಅಣ್ವಸ್ತ್ರ ಸಾಧನ ಪರೀಕ್ಷೆ ಪೋಖ್ರಾನ್‌ ಭೂಗರ್ಭದಲ್ಲಿ ಯಶಸ್ವಿಯಾಗಿತ್ತು. 24 ವರ್ಷಗಳ ನಂತರ ಭಾರತ ಎರಡನೇ ಅಣ್ವಸ್ತ್ರ ಪರೀಕ್ಷೆಯಲ್ಲಿ ಗಳಿಸಿದ ಯಶಸ್ಸು ಕಂಡು ಅಮೆರಿಕ ಸೇರಿ ಹಲವು ರಾಷ್ಟ್ರಗಳು ನಿಬ್ಬೆರಗಾದವು.

15 ಕಿಲೋ ಟನ್‌ ವಿದಳನ (15kt fission device), 45 ಕೆಟಿ ಥರ್ಮೋ ನ್ಯೂಕ್ಲಿಯರ್‌ ಹಾಗೂ 0.2 ಕೆಟಿ ಸಬ್‌–ಕಿಲೋಟನ್‌ ಪರಮಾಣು ಉಪಕರಣಗಳ ಪರೀಕ್ಷಾರ್ಥಕ ಪ್ರಯೋಗವನ್ನು ಒಂದೇ ಸಮಯದಲ್ಲಿ ನಡೆಸಿದ್ದರ ಬಗ್ಗೆ ತುರ್ತು ಪತ್ರಿಕಾಗೋಷ್ಠಿ ನಡೆಸಿ ವಾಜಪೇಯಿ ಘೋಷಿಸಿದರು. ದೇಶದ ವಿಜ್ಞಾನಿಗಳು, ಎಂಜಿನಿಯರ್‌ಗಳನ್ನು ಮನತುಂಬಿ ಪ್ರಶಂಸಿದರು.ಈ ಪರೀಕ್ಷೆಯಲ್ಲಿ ಡಾ.ಎ.ಪಿ.ಜೆ. ಅಬ್ದುಲ್‌ ಕಲಾಂ ಅವರ ತಂಡ ಪ್ರಮುಖ ಪಾತ್ರವಹಿಸಿತ್ತು.

1998ರ ಮೇ 13ರಂದು ನಡೆಸಿದ ಸಬ್‌–ಕಿಲೋಟನ್‌ 0.3 ಕೆಟಿ ಮತ್ತು 0.5 ಕೆಟಿ ಎರಡು ಅಣ್ವಸ್ತ್ರ ಸಾಧನಗಳ ಪರೀಕ್ಷೆಯೂ ಫಲ ನೀಡಿತು. ಇದಾಗಿ 17 ದಿನಗಳ ಅಂತರದಲ್ಲಿ ಪಾಕಿಸ್ತಾನವು ಬಲೂಚಿಸ್ತಾನದ ಛಾಗೈ ಗುಡ್ಡಗಳಲ್ಲಿ ಅಂಥದ್ದೇ ಪರೀಕ್ಷೆಗಳಿಗೆ ಮುಂದಾಯಿತು. ಈ ಬೆಳವಣಿಗೆ ಹಿನ್ನೆಲೆಯಲ್ಲಿ ವಾಜಪೇಯಿ ಅವರು ಅಣ್ವಸ್ತ್ರ ಪರೀಕ್ಷೆಗಳಿಗೆ ತಾತ್ಕಾಲಿಕ ನಿಷೇಧ ಘೋಷಿಸಿದರು.

ಅಬ್ದುಲ್‌ ಕಲಾಂ ಅವರೂ ಸಹ ಪ್ರತ್ಯೇಕ ಪತ್ರಿಕಾಗೋಷ್ಠಿಯಲ್ಲಿ ಡಿಆರ್‌ಡಿಒ ಮತ್ತು ಇತರ ಸಂಸ್ಥೆಗಳ ಸಹಕಾರ ಸಾಧನೆಯನ್ನು ಮಾಧ್ಯಮಗಳ ಮುಂದಿಟ್ಟರು. ಅದಾಗಲೇ ಅಣ್ವಸ್ತ್ರ ಬಲ ಹೊಂದಿದ್ದ ರಾಷ್ಟ್ರಗಳ ವಿಜ್ಞಾನಿಗಳು ಪೋಖ್ರಾನ್‌ ಆಗುಹೋಗುಗಳನ್ನು ವಿಶ್ಲೇಷಿಸಿ, ಯಶಸ್ವಿ ಪರೀಕ್ಷೆಯನ್ನು ಜಗತ್ತಿನ ಮುಂದೆ ಖಚಿತಪಡಿಸಿದರು. ’ಭಾರತ ನ್ಯೂಕ್ಲಿಯರ್‌ ಬಲ ಹೊಂದಿರುವ ರಾಷ್ಟ್ರವಾಗಿ ಪರಿವರ್ತನೆಯಾದುದು, ಅತ್ಯಂತ ಒತ್ತಡದ ಸನ್ನಿವೇಶದಲ್ಲಿಯೂ ವಾಜಪೇಯಿ ಅವರು ತೆಗೆದುಕೊಂಡ ದೃಢ ನಿರ್ಧಾರದಿಂದ’ ಎಂದು ಕಲಾಂ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದರು.

ಮೇಜರ್‌ ಜನರಲ್‌ ಪೃಥ್ವಿರಾಜ್‌ ಆಗಿ ಮಾರುವೇಷದಲ್ಲಿ ಅಬ್ದುಲ್‌ ಕಲಾಂ ಕಾರ್ಯಾಚರಣೆಯಲ್ಲಿ ಭಾಗಿಯಾಗುತ್ತಿದ್ದರು. ಈ ಪರೀಕ್ಷೆಯಲ್ಲಿ ಭಾಗಿಯಾಗಿದ್ದ ಎಲ್ಲರೂ ಕೋಡ್‌ ನೇಮ್‌ಗಳಿಂದಲೇ ಪರಸ್ಪರ ಸಂವಹನ ನಡೆಸುತ್ತಿದ್ದರು.

ಪರೀಕ್ಷೆ ಯಶಸ್ವಿಯಾದ ನಂತರ ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ಆರ್ಥಿಕವಾಗಿ, ಸೇನೆ ಹಾಗೂ ಮಂಜೂರಾತಿಗಳಲ್ಲಿ ತೊಡಕು ಉಂಟಾಯಿತು. ’ಭಾರತ ಅಣ್ವಸ್ತ್ರಗಳನ್ನು ಪರೀಕ್ಷಿಸುವ ಯಾವುದೇ ಉದ್ದೇಶ ಹೊಂದಿಲ್ಲ’ ಎಂದು ಆಗಿನ ವಿದೇಶಾಂಗ ವ್ಯವಹಾರಗಳ ಕಾರ್ಯದರ್ಶಿ ಕೆ.ರಘುನಾಥ್‌ ಅಮೆರಿಕದ ಅಧಿಕಾರಿಗಳಿಗೆ ಹೇಳಿಕೆ ನೀಡಿದ್ದರು. ಈ ಹೇಳಿಕೆ ನೀಡಿ ಒಂದು ತಿಂಗಳ ನಂತರ ಪರೀಕ್ಷೆ ನಡೆಸಲಾಗಿತ್ತು. ಪರೀಕ್ಷೆ ಅತ್ಯಂತ ರಹಸ್ಯವಾಗಿ ಯೋಜಿಸಿದ್ದರಿಂದ ರಘುನಾಥ್‌ ಅವರಿಗೂ ಇದರ ಸುಳಿವು ಇರಲಿಲ್ಲ. ವಾಜಪೇಯಿ, ರಕ್ಷಣಾ ಸಚಿವ ಜಾರ್ಜ್ ಫರ್ನಾಂಡಿಸ್‌, ಎಲ್‌.ಕೆ.ಅಡ್ವಾಣಿ ಸೇರಿದಂತೆ ಕಾರ್ಯಾಚರಣೆಯ ಮಾಹಿತಿ ಇದ್ದದ್ದು ಐವರಿಗೆ ಮಾತ್ರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT