ನವದೆಹಲಿ: ಟ್ರ್ಯಾಕ್ಟರ್ ರ್ಯಾಲಿಯ ವೇಳೆ ದೆಹಲಿಯಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಗಳ ವಿರುದ್ಧ ದೇಶದ್ರೋಹಕ್ಕೆ ಸಂಬಂಧಿಸಿದ ಪ್ರಕರಣವನ್ನು ದಾಖಲಿಸಿದ್ದಾರೆ.
ಹಿರಿಯ ಪೊಲೀಸ್ ಅಧಿಕಾರಿಯೊಬ್ಬರ ಪ್ರಕಾರ, ಭಾರತೀಯ ದಂಡಸಂಹಿತೆ 124ಎ (ದೇಶದ್ರೋಹ) ಅನ್ವಯ ಪ್ರಕರಣವನ್ನು ದಾಖಲಿಸಲಾಗಿದೆ. ಇದಕ್ಕೂ ಮೊದಲು ಪೊಲೀಸರು ನಟ ದೀಪ್ ಸಿಧು ಮತ್ತು ಗ್ಯಾಂಗ್ಸ್ಟರ್ ಲಖಾ ಸಿಧಾನಾ ವಿರುದ್ಧ ಕೆಂಪುಕೋಟೆ ಬಳಿ ನಡೆದಿದ್ದ ದಾಂದಲೆಗೆ ಸಂಬಂಧಿಸಿದಂತೆ ಎಫ್ಐಆರ್ ದಾಖಲಿಸಿದ್ದರು.
ಗಾಜಿಪುರ್ ಗಡಿ ಭಾಗದಿಂದ ಐಟಿಒವರೆಗೂ ಮಂಗಳವಾರ ಟ್ರ್ಯಾಕ್ಟರ್ ರ್ಯಾಲಿಯಲ್ಲಿ ಧಾವಿಸಿದ್ದ ಸಾವಿರಾರು ರೈತರು ಪೊಲೀಸರ ಜೊತೆಗೆ ಘರ್ಷಣೆಗೆ ಇಳಿದಿದ್ದರು. ಅಲ್ಲದೆ, ಕೆಂಪುಕೋಟೆಯನ್ನು ಪ್ರವೇಶಿಸಿದ್ದರು.
ದಾಂದಲೆ ನಡೆಸಿದ್ದ ರೈತರು ಕೆಂಪುಕೋಟೆಯ ಗೋಪುರದ ಮೇಲೆ ಧ್ವಜ ಹಾರಿಸಿದ್ದರು.
ಈ ಮಧ್ಯೆ ಕೆಂಪುಕೋಟೆಗೆ ಇದೇ 31ರವರೆಗೆ ಜನರಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ಈ ಕುರಿತ ಆದೇಶದಲ್ಲಿ ಕಾರಣದ ಉಲ್ಲೇಖವಿಲ್ಲ. ಆದರೆ, ಹಕ್ಕಿಜ್ವರ ಕುರಿತು ಹಿಂದೆ ಹೊರಡಿಸಿದ್ದ ಆದೇಶವನ್ನು ಉಲ್ಲೇಖಿಸಲಾಗಿದೆ.