ಬಹರಂಪುರ್(ಪಶ್ಚಿಮ ಬಂಗಾಳ): ಲೋಕಸಭೆಗೆ ಈವರೆಗೆ ನಡೆದಿರುವ 191 ಕ್ಷೇತ್ರಗಳ ಮತದಾನವು, ಎನ್ಡಿಎ 400 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿಯವರು 3ನೇ ಬಾರಿಗೆ ಅಧಿಕಾರಕ್ಕೇರುವ ಸೂಚನೆ ಕೊಟ್ಟಿದೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ಉತ್ತರ ಪ್ರದೇಶದ ಎಲ್ಲ 80 ಕ್ಷೇತ್ರಗಳ ಗೆಲುವನ್ನು ಮೋದಿಗೆ ಉಡುಗೊರೆಯಾಗಿ ನೀಡಲಾಗುವುದು ಎಂದು ಅವರು ಬಹರಂಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಿರ್ಮಲ್ ಕುಮಾರ್ ಸಹಾ ಪರ ಚುನಾವಣಾ ರ್ಯಾಲಿಯಲ್ಲಿ ಭಾಗವಹಿಸಿ ಮಾತನಾಡಿದರು.
ಲೋಕಸಭೆಯ 543 ಕ್ಷೇತ್ರಗಳಿಗೆ 7 ಹಂತಗಳಲ್ಲಿ ಮತದಾನ ನಡೆಯುತ್ತಿದ್ದು, ಏಪ್ರಿಲ್ 19 ಮತ್ತು ಏಪ್ರಿಲ್ 26ರಂದು ಎರಡು ಹಂತಗಳಲ್ಲಿ ಮತದಾನ ಮುಗಿದಿದೆ. 3ನೇ ಹಂತದ ಮತದಾನ ಮೇ 7ಕ್ಕೆ ನಡೆಯಲಿದೆ.
ಸಂದೇಶ್ಖಾಲಿ ಅಪರಾಧ ಮತ್ತು ರಾಮನವಮಿ ಗಲಭೆಗಳ ತಪ್ಪಿತಸ್ಥರನ್ನು ಕಾನೂನಿನ ಮೂಲಕ ಶಿಕ್ಷಿಸಲಾಗುವುದು ಎಂದು ಹೇಳಿದರು.
‘ಇಂತಹ ಘಟನೆಗಳು ಉತ್ತರ ಪ್ರದೇಶದಲ್ಲಿ ನಡೆದಿದ್ದರೆ ತಪ್ಪಿತಸ್ಥರ ಮುಂದಿನ 7 ಪೀಳಿಗೆ ನೆನಪಿನಲ್ಲಿಟ್ಟುಕೊಳ್ಳುವಂತಹ ಪಾಠ ಕಲಿಸುತ್ತಿದ್ದೆ’ ಎಂದೂ ಗುಡುಗಿದ್ದಾರೆ.
‘ಯಾವುದೇ ತಾರತಮ್ಯವಿಲ್ಲದ ಅಭಿವೃದ್ಧಿಯ ಗ್ಯಾರಂಟಿ ನೀಡಲು ನಾನು ಇಲ್ಲಿಗೆ ಬಂದಿರುವೆ’ಎಂದು ಅವರು ಹೇಳಿದ್ದಾರೆ.