ಜಮ್ಮು: ಪೂಂಛ್ನಲ್ಲಿ ಇತ್ತೀಚೆಗೆ ನಡೆದ ಮೂವರು ನಾಗರಿಕರ ನಿಗೂಢ ಸಾವಿನ ಕುರಿತು ಸೇನೆಯು ಕೋರ್ಟ್ ವಿಚಾರಣೆ ಪ್ರಾರಂಭಿಸಿದೆ ಎಂದು ಅಧಿಕೃತ ಮೂಲಗಳು ಸೋಮವಾರ ತಿಳಿಸಿವೆ.
ಜಮ್ಮು ಮತ್ತು ಕಾಶ್ಮೀರದ ಪೂಂಛ್ ಜಿಲ್ಲೆಯ ಸುರಾನ್ಕೋಟ್ ಪ್ರದೇಶದ ಡೇರಾ ಕಿ ಗಲಿ ಮತ್ತು ಬುಫ್ಲಿಯಾಜ್ ನಡುವೆ ಧಾತ್ಯರ್ ಮೋರ್ನಲ್ಲಿ ಡಿ.21ರಂದು ಭಯೋತ್ಪಾದಕರು ಎರಡು ಸೇನಾ ವಾಹನಗಳ ಮೇಲೆ ನಡೆಸಿದ ಹಠಾತ್ ದಾಳಿಯಲ್ಲಿ ಮೂವರು ಯೋಧರು ಹುತಾತ್ಮರಾಗಿದ್ದರು.
ಈ ದಾಳಿಯ ನಂತರ 27 ರಿಂದ 42 ವರ್ಷದೊಳಗಿನ ಮೂವರು ನಾಗರಿಕರನ್ನು ಸೇನೆಯು ವಿಚಾರಣೆಗಾಗಿ ಕರೆದೊಯ್ದಿತ್ತು. ಈ ಮೂವರು ಡಿ.22 ರಂದು ಶವವಾಗಿ ಪತ್ತೆಯಾಗಿದ್ದರು. ಕಸ್ಟಡಿ ವೇಳೆ ಚಿತ್ರಹಿಂಸೆ ನೀಡಿರುವುದನ್ನು ತೋರಿಸುವ ವಿಡಿಯೊ ತುಣುಕುಗಳು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಿದಾಡಿವೆ.
ವಿಚಾರಣೆಗೆ ಕರೆಸಿಕೊಂಡು ಕಸ್ಟಡಿಯಲ್ಲಿ ಚಿತ್ರಹಿಂಸೆ ನೀಡಿದ ಆರೋಪ, ನಾಗರಿಕರ ವ್ಯಾಪಕ ಆಕ್ರೋಶಕ್ಕೆ ಕಾರಣವಾದ ಈ ಘಟನೆಯನ್ನು ಸೇನೆಯು ಗಂಭೀರವಾಗಿ ಪರಿಗಣಿಸಿದೆ.