ಭೋಪಾಲ(ಮಧ್ಯಪ್ರದೇಶ): ಕೊರೊನಾ ವೈರಸ್ ಅನ್ನು ತೊಡೆದು ಹಾಕಲು ನಿತ್ಯ ಐದು ಬಾರಿ ಹನುಮಾನ್ ಚಾಲಿಸವನ್ನು ಪಠಿಸುವಂತೆ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ಜನರಲ್ಲಿ ಮನವಿ ಮಾಡಿದ್ದಾರೆ.
‘ಜನರ ಉತ್ತಮ ಆರೋಗ್ಯಕ್ಕಾಗಿ ನಾವೆಲ್ಲರೂ ಒಟ್ಟಾಗಿ ಆಧ್ಯಾತ್ಮಿಕ ಪ್ರಯತ್ನವನ್ನು ಮಾಡೋಣ. ಈ ಮೂಲಕ ಕೊರೊನಾ ವೈರಸ್ ಅನ್ನು ಕೊನೆಗಾಣಿಸೋಣ. ಅದಕ್ಕಾಗಿ ಇದೇ ಜುಲೈ 25ರಿಂದ ಆಗಸ್ಟ್ 5ರ ವರೆಗೆ ಪ್ರತಿದಿನ ಐದು ಬಾರಿ ಹನುಮಾನ್ ಚಾಲಿಸ ಮಂತ್ರ ಪಠಿಸಿ,’ ಎಂದು ಸಾದ್ವಿ ಪ್ರಜ್ಞಾ ಸಿಂಗ್ ಠಾಕೂರ್ ಜನರಿಗೆ ತಿಳಿಸಿದ್ದಾರೆ.
ಅಲ್ಲದೆ, ‘ಆಗಸ್ಟ್ 5 ರಂದು ದೀಪಗಳನ್ನು ಬೆಳಗಿಸಿ, ಭಗವಂತ ರಾಮನಿಗೆ ಆರತಿಯನ್ನು ಅರ್ಪಿಸುವ ಮೂಲಕ ಈ ಆಚರಣೆಯನ್ನು ಮುಕ್ತಾಯಗೊಳಿಸಿ,’ ಎಂದು ಅವರು ಮನವಿ ಮಾಡಿದ್ದಾರೆ.
ಆಚರಣೆಯನ್ನು ಕೊನೆಗೊಳಿಸಲು ತಿಳಿಸಿರುವ ಆಗಸ್ಟ್ 5ರಂದು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ `ಭೂಮಿ ಪೂಜೆ' ನಡೆಯಲಿದೆ.
ಇದೇ ಟ್ವೀಟ್ನಲ್ಲಿ ವಿಡಿಯೊವೊಂದನ್ನೂ ಹಂಚಿಕೊಂಡಿರುವ ಸಾದ್ವಿ ಪ್ರಜ್ಞಾ ಸಿಂಗ್ ಠಾಕೂರ್ ಅವರು, ಕೊರೊನಾ ವೈರಸ್ ಅನ್ನು ನಿಗ್ರಹಿಸುವ ಸಲುವಾಗಿ ಮಧ್ಯಪ್ರದೇಶದ ಬಿಜೆಪಿ ಸರ್ಕಾರವು ಆಗಸ್ಟ್ 4 ರವರೆಗೆ ಭೋಪಾಲ್ನಲ್ಲಿ ಲಾಕ್ಡೌನ್ ಜಾರಿಗೊಳಿಸಿದೆ ಎಂದೂ ಹೇಳಿದ್ದಾರೆ.
‘ಆಗಸ್ಟ್ 4 ರಂದು ಲಾಕ್ಡೌನ್ ಮುಗಿಯುತ್ತದೆ. ಹನುಮಾನ್ ಚಾಲಿಸ ಪಠಣೆ ಆಚರಣೆಯು ಆಗಸ್ಟ್ 5 ರಂದು ಕೊನೆಗೊಳ್ಳುತ್ತದೆ. ಅದೇ ದಿನ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ 'ಭೂಮಿ ಪೂಜೆ' ನೆರವೇರಲಿದೆ. ಆ ದಿನವನ್ನು ನಾವು ದೀಪಾವಳಿಯಂತೆ ಆಚರಿಸೋಣ’ ಎಂದು ಅವರು ತಿಳಿಸಿದ್ದಾರೆ.
‘ಜನರು ... ದೇಶದ ಹಿಂದೂಗಳು 'ಹನುಮಾನ್ ಚಾಲಿಸ'ವನ್ನು ಒಂದೇ ಬಾರಿಗೆ ಪಠಿಸಿದರೆ, ಅದು ಖಂಡಿತವಾಗಿಯೂ ಕೆಲಸ ಮಾಡುತ್ತದೆ. ಅದರ ಮೂಲಕ ನಾವು ಕೊರೊನಾ ವೈರಸ್ನಿಂದ ಮುಕ್ತಿ ಪಡೆಯಬಹುದು. ಇದು ಭಗವಂತ ರಾಮನಿಗೆ ನಿಮ್ಮ ಪ್ರಾರ್ಥನೆ ಕೂಡ’ ಎಂದು ಪ್ರಜ್ಞಾ ಸಿಂಗ್ ಹೇಳಿದ್ದಾರೆ.
ಪ್ರಜ್ಞಾ ಸಿಂಗ್ ಅವರ ಟ್ವೀಟ್ ಹಿನ್ನೆಲೆಯಲ್ಲಿ ಟ್ವಿಟರ್ನಲ್ಲಿ ಭಾನುವಾರ ‘Hanuman Chalisa’ ಟ್ರೆಂಡ್ ಆಗಿದೆ.
आइए हम सब मिलकर कोरोना महामारी को समाप्त करने के लिए लोगों के अच्छे स्वास्थ्य की कामना के लिए एक आध्यात्मिक प्रयास करें आज25 से 5 अगस्त तक प्रतिदिन शाम 7:00 बजे अपने घरों में हनुमान चालीसा का 5 बार पाठकरें5 अगस्त को अनुष्ठान का रामलला की आरती के साथ घरों में दीप जलाकर समापन करें pic.twitter.com/Ba0J2KrkA8
— Sadhvi Pragya singh thakur (@SadhviPragya_MP) July 25, 2020
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.