ನವದೆಹಲಿ: ಮಂಗಳೂರು ಸೇರಿದಂತೆ ದೇಶದ ಆರು ವಿಮಾನ ನಿಲ್ದಾಣಗಳ ಅಭಿವೃದ್ಧಿಗಾಗಿ ಖಾಸಗಿ ಸಹಭಾಗಿತ್ವ ಪಡೆದುಕೊಳ್ಳಲು ಕೇಂದ್ರ ಸಚಿವ ಸಂಪುಟ ತಾತ್ವಿಕ ಒಪ್ಪಿಗೆ ಸೂಚಿಸಿದೆ.
ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಗುರುವಾರ ಸಂಜೆ ನಡೆದ ಕೇಂದ್ರ ಸಂಪುಟದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಮಂಗಳೂರು ಜೊತೆಗೆ ಅಹಮದಾಬಾದ್, ಜೈಪುರ, ಲಕ್ನೋ, ಗುವಾಹಟಿ ಮತ್ತು ತಿರುವನಂತಪುರ ವಿಮಾನ ನಿಲ್ದಾಣಗಳೂ ಖಾಸಗಿ ಸಹಭಾಗಿತ್ವ ಪಡೆಯಲಿರುವ ಪಟ್ಟಿಯಲ್ಲಿ ಸೇರಿವೆ.
ಸುಗಮ ಕಾರ್ಯಾಚರಣೆ ಹಾಗೂ ನಿರ್ವಹಣೆ ಮತ್ತು ಅಭಿವೃದ್ಧಿ ಉದ್ದೇಶದಿಂದ ಸಾರ್ವಜನಿಕ, ಖಾಸಗಿ ಸಹಭಾಗಿತ್ವದ (ಪಿಪಿಪಿ) ಮಾದರಿ ಅನುಸರಿಸಲು ನಿರ್ಧರಿಸಲಾಗಿದೆ. ಇದರಿಂದ ಈ ವಿಮಾನ ನಿಲ್ದಾಣಗಳು ವಿಶ್ವ ದರ್ಜೆಗೆ ಏರಲು ನೆರವಾಗಲಿದೆ ಎಂದು ಸಭೆಯಲ್ಲಿ ಪಾಲ್ಗೊಂಡಿದ್ದ ಕಾನೂನು ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ತಿಳಿಸಿದರು.
ವಿಶ್ವ ದರ್ಜೆಯ ಮಟ್ಟಕ್ಕೆ ಏರಿರುವ ನವದೆಹಲಿ, ಬೆಂಗಳೂರು, ಕೊಚ್ಚಿ, ಮುಂಬೈ ಮತ್ತು ಹೈದರಾಬಾದ್ ವಿಮಾನ ನಿಲ್ದಾಣಗಳನ್ನು ಸದ್ಯ ಇದೇ ಮಾದರಿಯಲ್ಲಿ ನಿರ್ವಹಿಸಲಾಗುತ್ತಿದೆ ಎಂದೂ ಅವರು ಹೇಳಿದರು.