ನವದೆಹಲಿ: ಹಿಮಾಚಲ ಪ್ರದೇಶದಲ್ಲಿ ಬಿಜೆಪಿಯ ‘ಆಪರೇಷನ್ ಕಮಲ’ ಪ್ರಯತ್ನವನ್ನು ವಿಫಲಗೊಳಿಸಿ, ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು ನೇತೃತ್ವದ ಸರ್ಕಾರವನ್ನು ರಕ್ಷಿಸುವಲ್ಲಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಮಹತ್ವದ ಪಾತ್ರ ವಹಿಸಿದ್ದರು ಎಂದು ಮೂಲಗಳು ಗುರುವಾರ ತಿಳಿಸಿವೆ.
ಪ್ರಿಯಾಂಕಾ ಅವರು, ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸುಖು ಹಾಗೂ ಇತರ ನಾಯಕರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಶಾಸಕರ ಬಂಡಾಯ ಶಮನ ಮಾಡುವ ಜೊತೆಗೆ ಪಕ್ಷ ನೇತೃತ್ವದ ಸರ್ಕಾರ ಗಟ್ಟಿಯಾಗುವಂತೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂದು ತಿಳಿಸಿವೆ.
‘ಆಪರೇಷನ್ ಕಮಲ’ದ ಸುಳಿವು ಸಿಗುತ್ತಿದ್ದಂತೆಯೇ ಚುರುಕಾದ ಪ್ರಿಯಾಂಕಾ ಅವರು, ಹಿರಿಯ ನಾಯಕರಾದ ಭೂಪಿಂದರ್ ಸಿಂಗ್ ಹೂಡಾ, ಡಿ.ಕೆ.ಶಿವಕುಮಾರ್ ಹಾಗೂ ಭೂಪೇಶ್ ಬಘೆಲ್ ಅವರನ್ನು ವೀಕ್ಷಕರನ್ನಾಗಿ ನಿಯೋಜಿಸಿ, ಬಿಕ್ಕಟ್ಟು ಬಗೆಹರಿಯುವಂತೆ ನೋಡಿಕೊಂಡರು’ ಎಂದೂ ಮೂಲಗಳು ಹೇಳಿವೆ.