ನ್ಯಾಯಾಂಗ ಅಧಿಕಾರಿಗಳ ಬಡ್ತಿಯು ಗುಜರಾತ್ ರಾಜ್ಯ ನ್ಯಾಯಾಂಗ ಸೇವಾ ನಿಯಮಗಳು 2005ರ ಉಲ್ಲಂಘನೆಯಾಗಿದೆ. ಅರ್ಹತೆ, ಸೇವಾ ಹಿರಿತನ ಮತ್ತು ಸೂಕ್ತ ಪರೀಕ್ಷಾ ಉತ್ತೀರ್ಣತೆಯ ಆಧಾರದ ಮೇಲೆ ಬಡ್ತಿಗಳನ್ನು ನೀಡಬೇಕು ಎಂದು ನ್ಯಾಯಮೂರ್ತಿಗಳಾದ ಎಂ. ಆರ್. ಷಾ ಮತ್ತು ಸಿ. ಟಿ. ರವಿಕುಮಾರ್ ಅವರನ್ನೊಳಗೊಂಡ ಪೀಠ ಹೇಳಿತು.
‘ನ್ಯಾಯಾಂಗ ಅಧಿಕಾರಿಗಳಿಗೆ ಪದೋನ್ನತಿ ನೀಡಿ ರಾಜ್ಯ ಸರ್ಕಾರ ಹೊರಡಿಸಿದ ಆದೇಶವು ಕಾನೂನುಬಾಹಿರ ಮತ್ತು ಈ ನ್ಯಾಯಾಲಯದ ತೀರ್ಪಿಗೆ ವಿರುದ್ಧವಾಗಿದೆ. ಆದ್ದರಿಂದ, ಇದು ಸಮರ್ಥನೀಯವಲ್ಲ’ ಎಂದು ಪೀಠ ಹೇಳಿತು.
‘ನಾವು ಬಡ್ತಿ ಪಟ್ಟಿಯ ಅನುಷ್ಠಾನವನ್ನು ತಡೆಹಿಡಿಯುತ್ತೇವೆ. ಬಡ್ತಿ ಹೊಂದಿದವರನ್ನು ಮೂಲ ಹುದ್ದೆಗೆ ಕಳುಹಿಸಲಾಗುತ್ತಿದೆ’ ಎಂದು ಸುಪ್ರೀಂ ಕೋರ್ಟ್ ಹೇಳಿತು.
ಬಡ್ತಿಗಳಿಗೆ ತಡೆ ನೀಡಿ ಮಧ್ಯಂತರ ಆದೇಶವನ್ನು ಕೋರ್ಟ್ ನೀಡಿತು. ಅಲ್ಲದೆ, ಮೇ 15 ರಂದು ನ್ಯಾಯಮೂರ್ತಿ ಷಾ ನಿವೃತ್ತಿಯಾಗುತ್ತಿರುವ ಕಾರಣ ಈ ಪ್ರಕರಣವನ್ನು ಸೂಕ್ತ ಪೀಠದಿಂದ ವಿಚಾರಣೆ ನಡೆಸುವಂತೆ ಸೂಚಿಸಿತು.
68 ನ್ಯಾಯಾಂಗ ಅಧಿಕಾರಿಗಳನ್ನು ಜಿಲ್ಲಾ ನ್ಯಾಯಾಧೀಶರ ಉನ್ನತ ಶ್ರೇಣಿಗೆ ಆಯ್ಕೆ ಮಾಡಿರುವುದನ್ನು ಪ್ರಶ್ನಿಸಿ ಹಿರಿಯ ಸಿವಿಲ್ ನ್ಯಾಯಾಧೀಶ ಕೇಡರ್ ಅಧಿಕಾರಿಗಳಾದ ರವಿಕುಮಾರ್ ಮಾಹೇತಾ ಮತ್ತು ಸಚಿನ್ ಪ್ರತಾಪ್ರಾಯ್ ಮೆಹ್ತಾ ಅವರು ಸಲ್ಲಿಸಿದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿದೆ.