ತಿರುವನಂತಪುರ: ‘ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಕುರಿತಂತೆ ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಮೌನ ವಹಿಸಿದ್ದಾರೆ’ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ದೂರಿದ್ದಾರೆ.
‘ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರವು ಸಿಎಎ ಜಾರಿಗೆ ನಿರ್ಧಾರ ತೆಗೆದುಕೊಂಡರೂ, ವಯನಾಡ್ನ ಸಂಸದರು ತಮ್ಮ ನೇತೃತ್ವದಲ್ಲಿ ನಡೆಸಿದ ಭಾರತ್ ಜೋಡೊ ನ್ಯಾಯ ಯಾತ್ರೆಯ ಸಂದರ್ಭ ಒಂದೇ ಒಂದು ಶಬ್ದ ಮಾತನಾಡಲಿಲ್ಲ’ ಎಂದು ಸಿಪಿಎಂ ಆಯೋಜಿಸಿದ್ದ ಸಿಎಎ ವಿರೋಧಿ ರ್ಯಾಲಿಯಲ್ಲಿ ಅವರು ವಾಗ್ದಾಳಿ ನಡೆಸಿದರು.
‘ಯಾತ್ರೆಯಲ್ಲೂ ಸಿಎಎ ಬಗ್ಗೆ ಮಾತನಾಡದ ರಾಹುಲ್, ನಂತರವೂ ಈ ಕುರಿತಂತೆ ಏನೊಂದು ಹೇಳುತ್ತಿಲ್ಲ’ ಎಂದು ಆರೋಪಿಸಿದ್ದಾರೆ.
ರಾಹುಲ್ ಗಾಂಧಿ ವಿರುದ್ಧ ಮುಖ್ಯಮಂತ್ರಿಯು ಹೇಳಿಕೆ ನೀಡಿದ ನಂತರ ಕಾಂಗ್ರೆಸ್ ನೇತೃತ್ವದ ಯುಡಿಎಫ್, ‘ರಾಜಕೀಯ ಲಾಭಕ್ಕಾಗಿ ಈ ವಿಷಯವನ್ನು ಸಿ.ಎಂ ಪ್ರಸ್ತಾಪಿಸುತ್ತಿದ್ದಾರೆ’ ಎಂದು ವಿಜಯನ್ ವಿರುದ್ಧ ಗುಡುಗಿದೆ.