ಮುಂಬೈ: ಗೌರಿ ಲಂಕೇಶ್ ಹತ್ಯೆಗೂ ಆರ್ಎಸ್ಎಸ್ಗೂ ಸಂಬಂಧವಿದೆ ಎಂದು ಆರೋಪಿಸಿ ನೀಡಿದ್ದ ಹೇಳಿಕೆ ಸಂಬಂಧ ದಾಖಲಾಗಿದ್ದ ಮಾನಹಾನಿ ಪ್ರಕರಣ ರದ್ದುಪಡಿಸಲು ಕೋರಿ ಕೋರಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಂಗಳವಾರ ಬಾಂಬೆ ಹೈಕೋರ್ಟ್ನ ಮೆಟ್ಟಿಲೇರಿದ್ದಾರೆ.
ಅಲ್ಲದೆ, ಪ್ರಕರಣವನ್ನು ಸಿಪಿಎಂ ನಾಯಕ ಸೀತಾರಾಂ ಯೆಚೂರಿ ವಿರುದ್ಧ ದಾಖಲಿಸಿರುವ ಪ್ರಕರಣದ ಜೊತೆಗೆ ಒಟ್ಟುಗೂಡಿಸಲಾಗದು. ಏಕೆಂದರೆ, ಇಬ್ಬರು ಭಿನ್ನ ಸಂದರ್ಭಗಳಲ್ಲಿ ಹೇಳಿಕೆ ನೀಡಿದ್ದು ಭಿನ್ನ ಪಕ್ಷ, ಭಿನ್ನ ಸಿದ್ಧಾಂತ ಹೊಂದಿದ್ದವರು ಎಂದು ಅರ್ಜಿಯಲ್ಲಿ ಕೋರಲಾಗಿದೆ.
ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಸ್.ವಿ.ಕೊತ್ವಾಲ್ ಅವರು ಡಿಸೆಂಬರ್ 5ಕ್ಕೆ ಮುಂದೂಡಿದರು. ವಕೀಲ ಧ್ರುತಿಮನ್ ಜೋಶಿ ಅವರು 2017ರಲ್ಲಿ ರಾಹುಲ್ಗಾಂಧಿ, ಅವರ ತಾಯಿ ಸೋನಿಯಾಗಾಂಧಿ ಮತ್ತು ಯೆಚೂರಿ ಅವರ ವಿರುದ್ಧ ಪ್ರಕರಣ ದಾಖಲಿಸಿದ್ದರು.
2019ರಲ್ಲಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಸೋನಿಯಾ ಗಾಂಧಿ ವಿರುದ್ಧದ ಪ್ರಕರಣವನ್ನು ವಜಾಮಾಡಿತ್ತು. ಆದರೆ, ರಾಹುಲ್ಗಾಂಧಿ ಮತ್ತು ಸೀತಾರಾಂ ಯೆಚೂರಿ ಅವರಿಗೆ ನೋಟಿಸ್ ಜಾರಿ ಮಾಡಿತ್ತು. ಜಂಟಿ ವಿಚಾರಣೆ ನಡೆಸಬಾರದು ಎಂಬುದರ ಆಧಾರದಲ್ಲಿ ಅರ್ಜಿ ವಜಾ ಕೋರಿ ಇಬ್ಬರೂ ಅರ್ಜಿ ಸಲ್ಲಿಸಿದ್ದರು. ಮ್ಯಾಜಿಸ್ಟ್ರೇಟ್ ಕೋರ್ಟ್ ಇದನ್ನು ತಳ್ಳಿಹಾಕಿತ್ತು.