ನವದೆಹಲಿ: ರೈಲ್ವೆ ಇಲಾಖೆಯಲ್ಲಿ ನಡೆದಿದೆ ಎನ್ನಲಾದ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ನಿರ್ಣಾಯಕವಾದ ದೋಷಾರೋಪ ಪಟ್ಟಿಯನ್ನು ಸಲ್ಲಿಸುವಲ್ಲಿನ ವಿಳಂಬಕ್ಕೆ ದೆಹಲಿಯ ನ್ಯಾಯಾಲಯವೊಂದು ಸಿಬಿಐ ಅಧಿಕಾರಿಗಳನ್ನು ಬುಧವಾರ ತರಾಟೆಗೆ ತೆಗೆದುಕೊಂಡಿದೆ.
ಈ ಹಗರಣದಲ್ಲಿ ಆರ್ಜೆಡಿ ನಾಯಕ ಲಾಲು ಪ್ರಸಾದ್ ಮತ್ತು ಅವರ ಕುಟುಂಬದ ಕೆಲವು ಸದಸ್ಯರು ಕೂಡ ಆರೋಪಿಗಳಾಗಿದ್ದಾರೆ. ದೋಷಾರೋಪ ಪಟ್ಟಿಯನ್ನು ಸಲ್ಲಿಸಲು ಸಿಬಿಐ ಅಧಿಕಾರಿಗಳು ಪ್ರತಿಬಾರಿಯೂ ಹೆಚ್ಚುವರಿ ಕಾಲಾವಕಾಶ ಕೋರುತ್ತಿರುವುದಕ್ಕೆ ನ್ಯಾಯಾಲಯವು ಅಸಮಾಧಾನ ವ್ಯಕ್ತಪಡಿಸಿತು.
ಅಂತಿಮ ವರದಿಯನ್ನು ಜೂನ್ 7ಕ್ಕೆ ಮೊದಲು ಸಲ್ಲಿಸಬೇಕು ಎಂದು ಸಿಬಿಐಗೆ ತಾಕೀತು ಮಾಡಿದೆ.
ರೈಲ್ವೆ ಇಲಾಖೆಯ ವಿವಿಧ ವಲಯಗಳಲ್ಲಿ 2004ರಿಂದ 2009ರ ನಡುವಿನ ಅವಧಿಯಲ್ಲಿ ನಡೆದ ನೇಮಕಾತಿಯಲ್ಲಿ ಹಲವರು ಜಮೀನನ್ನು ಲಾಲು ಅವರ ಕುಟುಂಬದ ಸದಸ್ಯರಿಗೆ ತೀರಾ ಕಡಿಮೆ ದರಕ್ಕೆ ಮಾಡಿದ್ದಕ್ಕೆ ‘ಡಿ’ ದರ್ಜೆ ನೌಕರಿ ಗಿಟ್ಟಿಸಿಕೊಂಡರು ಎಂದು ಸಿಬಿಐ ಆರೋಪಿಸಿದೆ. ಆ ಅವಧಿಯಲ್ಲಿ ಲಾಲು ಅವರು ರೈಲ್ವೆ ಸಚಿವರಾಗಿದ್ದರು.