ಜೈಪುರ: ರಾಜಸ್ಥಾನದ ಕೋಟ್ಪುತಲಿ ಬಹರೋಡ್ ಜಿಲ್ಲೆಯ ಪ್ರಾಗ್ಪುರದಲ್ಲಿರುವ ಜವಾಹರ್ ನವೋದಯ ಶಾಲೆಯಲ್ಲಿ 10ನೇ ತರಗತಿ ವಿದ್ಯಾರ್ಥಿ, ದಲಿತ ಬಾಲಕ ತರಗತಿ ಒಳಗೆ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
ಬುಧವಾರ ಘಟನೆ ನಡೆದಿದ್ದು, ಬಾಲಕನ ಕುಟುಂಬಸ್ಥರು ಮೃತದೇಹವನ್ನು ಸ್ವೀಕರಿಸಲು ನಿರಾಕರಿಸುತ್ತಿದ್ದಾರೆ. ಇಬ್ಬರು ಶಿಕ್ಷಕರು ತಮ್ಮ ಮಗನನ್ನು ಕೊಲೆ ಮಾಡಿ, ನಂತರ ಇದೊಂದು ಆತ್ಮಹತ್ಯೆ ಎಂದು ಬಿಂಬಿಸಲು ನೇಣು ಬಿಗಿದಿದ್ದಾರೆ ಎಂದು ಕುಟುಂಸ್ಥರು ಆರೋಪಿಸಿದ್ದಾರೆ. ಶಿಕ್ಷಕರನ್ನು ಬಂಧಿಸುವಂತೆ ಆಗ್ರಹಿಸಿ ಧರಣಿ ನಡೆಸುತ್ತಿದ್ದಾರೆ.
‘ಇಬ್ಬರು ಶಿಕ್ಷಕರು ತಮ್ಮ ಮಗನಿಗೆ ಕಿರುಕುಳ ನೀಡಿರುವುದಾಗಿ ಬಾಲಕನ ಕುಟುಂಬಸ್ಥರು ಆರೋಪಿಸಿದ್ದಾರೆ. ಅವರು ಧರಣಿ ನಡೆಸುತ್ತಿರುವ ಕಾರಣದಿಂದ ಮರಣೋತ್ತರ ಪರೀಕ್ಷೆಯೂ ನಡೆದಿಲ್ಲ’ ಎಂದು ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಶರ್ಮಾ ಹೇಳಿದ್ದಾರೆ.
ಆರೋಪಿ ಶಿಕ್ಷಕರ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ಈವರೆಗೆ ಯಾರನ್ನೂ ಬಂಧಿಸಿಲ್ಲ ಎಂದು ಪೊಲಿಸರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.