ವಾರಣಾಸಿ: ಇಲ್ಲಿ ಆರಂಭವಾದ ಐದು ದಿನಗಳ ಆರ್ಎಸ್ಎಸ್ ಸಭೆಯಲ್ಲಿ ರಾಮ ಮಂದಿರ ಮತ್ತು ಧರ್ಮಸಭಾ ಆಯೋಜಿಸುವ ಕುರಿತು ಪ್ರಮುಖವಾಗಿ ಚರ್ಚಿಸಲಾಯಿತು.
ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಈ ಎರಡು ವಿಷಯಗಳ ಬಗ್ಗೆ ಸಭೆಯಲ್ಲಿ ಪ್ರಮುಖರೊಂದಿಗೆ ಸಮಾಲೋಚನೆ ನಡೆಸಿದರು.
ರಾಮ ಮಂದಿರ ನಿರ್ಮಿಸಲು ಶಾಸನ ರೂಪಿಸುವಂತೆ ಕೇಂದ್ರದ ಎನ್ಡಿಎ ಸರ್ಕಾರದ ಮೇಲೆ ಒತ್ತಡ ಹೇರಲು ಬೆಂಗಳೂರು, ನಾಗ್ಪುರ ಮತ್ತು ಅಯೋಧ್ಯೆಯಲ್ಲಿ ಧರ್ಮಸಭಾಗಳನ್ನು ಈ ತಿಂಗಳ ಅಂತ್ಯದಲ್ಲಿ ಆಯೋಜಿಸಲು ಉದ್ದೇಶಿಸಲಾಗಿದೆ.
ಧರ್ಮಸಭಾಗಳು ಯಶಸ್ವಿಯಾಗಿ ನಡೆಯುವಂತೆ ಆರ್ಎಸ್ಎಸ್ ಕಾರ್ಯಕರ್ತರು ಶ್ರಮಿಸಬೇಕು ಎಂದು ಸಭೆಯಲ್ಲಿ ಸೂಚಿಸಲಾಯಿತು.
ದೇಶದ ವಿವಿಧ ಭಾಗಗಳ ಸಂಘದ 250 ಹಿರಿಯ ಕಾರ್ಯಕರ್ತರು ಈ ಸಭೆಯಲ್ಲಿ ಭಾಗವಹಿಸಿದ್ದಾರೆ.
2019ರಲ್ಲಿ ನಡೆಯುವ ಲೋಕಸಭಾ ಚುನಾವಣೆಗೆ ಕಾರ್ಯತಂತ್ರ ರೂಪಿಸುವ ಕುರಿತು ಅಭಿಪ್ರಾಯಗಳನ್ನು ನೀಡುವಂತೆ ಮೋಹನ್ ಭಾಗವತ್ ಅವರು ಕಾರ್ಯಕರ್ತರಿಗೆ ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.