ಆಸ್ಪತ್ರೆಯಲ್ಲಿ ನಿರ್ಲಕ್ಷ್ಯದಿಂದಾಗಿ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ ಎಂಬ ಕಾರಣಕ್ಕೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರವು ಆಸ್ಪತ್ರೆಯ ಪರವಾನಗಿಯನ್ನು ಸೋಮವಾರ ಅಮಾನತು ಮಾಡಿತ್ತು.
ಈ ಕುರಿತು ಕೂಲಂಕಷವಾಗಿ ತನಿಖೆಗೊಳಪಡಿಸದೆ, ಏಕಾಏಕಿ ಕ್ರಮ ಕೈಗೊಂಡಿರುವುದರಿಂದ ಈ ಆಸ್ಪತ್ರೆ ಮೇಲೆ ಅವಲಂಬಿತರಾಗಿದ್ದ ಬಡವರಿಗೆ ಅನ್ಯಾಯವಾಗಿದೆ ಎಂದು ವರುಣ್ ಗಾಂಧಿ ಅವರು ಪ್ರತಿಪಾದಿಸಿದ್ದಾರೆ.
ಈ ಸಂಬಂಧ ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಬ್ರಜೇಶ್ ಪಾಠಕ್ ಅವರಿಗೆ ಬರೆದಿರುವ ಪತ್ರವನ್ನು ಎಕ್ಸ್ (ಟ್ವಿಟರ್) ವೇದಿಕೆಯಲ್ಲಿ ಹಂಚಿಕೊಂಡಿದ್ದಾರೆ.
ಸರ್ಕಾರದ ಕ್ರಮದಿಂದಾಗಿ ಈ ಪ್ರಾಂತ್ಯದಲ್ಲಿ ವ್ಯತಿರಿಕ್ತ ಪರಿಣಾಮ ಬೀರಿದೆ. ಈ ಪ್ರಕರಣದಲ್ಲಿ ಹೊಣೆಗಾರಿಕೆ ನಿರ್ಣಾಯಕವಾಗಿದ್ದರೂ, ನಿಷ್ಪಕ್ಷಪಾತ ಮತ್ತು ನ್ಯಾಯೋಚಿತವಾದ ತತ್ವಗಳನ್ನು ಎತ್ತಿಹಿಡಿಯುವುದು ಅತ್ಯಗತ್ಯವಾಗಿದೆ ಎಂದು ಹೇಳಿದ್ದಾರೆ.
ಈ ಆಸ್ಪತ್ರೆ ಜತೆ ನನಗೆ ಭಾವನಾತ್ಮಕ ಸಂಬಂಧ ಇರುವುದು ಹೌದು. ಆದರೆ, ನನ್ನ ಅಥವಾ ನನ್ನ ಕುಟುಂಬಕ್ಕಾಗಿ ಈ ಅರ್ಜಿ ಸಲ್ಲಿಸುತ್ತಿಲ್ಲ. ಬದಲಿಗೆ ಜನರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಈ ಕೋರಿಕೆ ಮಾಡುತ್ತಿರುವುದಾಗಿ ತಿಳಿಸಿದ್ದಾರೆ.