ನವದೆಹಲಿ: ದೆಹಲಿಯ ವಿದ್ಯುತ್ ಸರಬರಾಜು ಮಂಡಳಿಗಳಿಗೆ(ಡಿಸ್ಕಾಂ) ಅರವಿಂದ ಕೇಜ್ರಿವಾಲ್ ನೇತೃತ್ವದ ದೆಹಲಿ ಸರ್ಕಾರ ನಾಮ ನಿರ್ದೇಶನ ಮಾಡಿದ್ದ ಸದಸ್ಯರನ್ನು ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ ವಜಾ ಮಾಡಿದ್ದಾರೆ. ಸಕ್ಸೇನಾ ಅವರ ಈ ಕ್ರಮ ಅಸಂವಿಧಾನಿಕ ಮತ್ತು ಕಾನೂನು ಬಾಹಿರ ಎಂದು ದೆಹಲಿ ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಹೇಳಿದ್ದಾರೆ.
ದೆಹಲಿಯ ಚುನಾಯಿತ ಸರ್ಕಾರ ಕೈಗೊಂಡ ನಿರ್ಧಾರಗಳನ್ನು ಹಿಂಪಡೆಯುವ ಹೊಸ ಸಂಪ್ರದಾಯವನ್ನು ಲೆಫ್ಟಿನೆಂಟ್ ಗವರ್ನರ್ ಆರಂಭಿಸಿದ್ದಾರೆ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ವಾಗ್ದಾಳಿ ನಡೆಸಿದರು.
ಈ ನೇಮಕದ ಹಿಂದೆ ₹8,000 ಕೋಟಿ ಅಕ್ರಮದ ಆರೋಪ ಮಾಡಿರುವ ಲೆಫ್ಟಿನೆಂಟ್ ಗವರ್ನರ್, ಕೇಂದ್ರದ ತನಿಖಾ ಸಂಸ್ಥೆಗಳಿಂದ ತನಿಖೆ ನಡೆಸಲಿ ಎಂದು ಸಿಸೋಡಿಯಾ ಸವಾಲು ಹಾಕಿದ್ದಾರೆ.
ದೆಹಲಿಯ ಇಂಧನ ಇಲಾಖೆಯ ಜವಾಬ್ದಾರಿಯನ್ನೂ ಹೊಂದಿರುವ ಉಪ ಮುಖ್ಯಮಂತ್ರಿ ಮನೀಷ್ ಸಿಸೋಡಿಯಾ, ವಿ.ಕೆ. ಸಕ್ಸೇನಾ ನಿರ್ಧಾರವು ಅಸಂವಿಧಾನಿಕ, ಕಾನೂನುಬಾಹಿರ ಮತ್ತು ಸ್ಥಾಪಿತ ಕಾರ್ಯವಿಧಾನಗಳಿಗೆ ವಿರುದ್ಧವಾಗಿದೆ ಎಂದು ಟೀಕಿಸಿದ್ದಾರೆ.
ನಮ್ಮ ನಡುವಿನ ಭಿನ್ನಾಭಿಪ್ರಾಯದ ಹಿನ್ನೆಲೆಯಲ್ಲಿ ಡಿಸ್ಕಾಂ ಸದಸ್ಯರನ್ನು ವಜಾ ಮಾಡಿದಂತೆ ಕಾಣುತ್ತಿದೆ. ಭಿನ್ನಾಭಿಪ್ರಾಯದ ವಿಷಯವನ್ನು ಹೀಗೆ ಬಳಸಬಾರದು. ಅದಕ್ಕೆಂದು ನಿಯಮಾವಳಿ ಇವೆ ಎಂದು ಅವರು ಹೇಳಿದರು.
ಲೆಫ್ಟಿನೆಂಟ್ ಗವರ್ನರ್ ತಮ್ಮ ಅಧಿಕಾರದ ಮಿತಿ ಕುರಿತಂತೆ ಸಂವಿಧಾನ ಮತ್ತು ಸುಪ್ರೀಂ ಕೋರ್ಟ್ ಆದೇಶಗಳನ್ನೂ ಪಾಲಿಸುತ್ತಿಲ್ಲ ಎಂದು ಆರೋಪಿಸಿದ ಅವರು, ಪೊಲೀಸ್, ಭೂಮಿ ಮತ್ತು ಸೇವೆಗಳ ಕುರಿತಂತೆ ಮಾತ್ರ ಅವರು ಸ್ವಂತ ನಿರ್ಧಾರ ಕೈಗೊಳ್ಳಬಹುದು ಎಂದು ಸಿಸೋಡಿಯಾ ಹೇಳಿದ್ದಾರೆ.
ಎಎಪಿ ಮುಖಂಡ ಜಾಸ್ಮಿನ್ ಶಾ ಸೇರಿದಂತೆ ಇಂಧನ ಇಲಾಖೆಯ ಡಿಸ್ಕಾಂಗಳಿಗೆ ಸರ್ಕಾರ ನಾಮ ನಿರ್ದೇಶನ ಮಾಡಿದ್ದ ಸದಸ್ಯರನ್ನು ವಜಾ ಮಾಡಿ, ಹಿರಿಯ ಅಧಿಕಾರಿಗಳನ್ನು ಆ ಜಾಗಕ್ಕೆ ನೇಮಿಸಲಾಗಿದೆ ಎಂದು ಲೆಫ್ಟಿನೆಂಟ್ ಗವರ್ನರ್ ಕಚೇರಿ ಮೂಲಗಳು ತಿಳಿಸಿದ್ದವು.