ನೂಹ್ (ಹರಿಯಾಣ) (ಪಿಟಿಐ): ರೋಲ್ಸ್ ರಾಯ್ಸ್ ಮತ್ತು ತೈಲ ಟ್ಯಾಂಕರ್ ನಡುವೆ ಸಂಭವಿಸಿದ ಅಪಘಾತದಲ್ಲಿ ಗಾಯಗೊಂಡಿರುವ ಕುಬೇರ್ ಗ್ರೂಪ್ ನಿರ್ದೇಶಕ ವಿಕಾಸ್ ಮಾಲು ಅವರಿಗೆ ಅಪಘಾತದ ತನಿಖೆಗೆ ಹಾಜರಾಗುವಂತೆ ಪೊಲೀಸರು ನೋಟಿಸ್ ಕಳುಹಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ.
ಹರಿಯಾಣದ ಉಮ್ರಿ ಗ್ರಾಮದ ಬಳಿ ದೆಹಲಿ-ಮುಂಬೈ-ಬರೋಡಾ ಎಕ್ಸ್ಪ್ರೆಸ್ ವೇನಲ್ಲಿ ಈಚೆಗೆ ಸಂಭವಿಸಿದ ಅಪಘಾತದಲ್ಲಿ ತೈಲ ಟ್ಯಾಂಕರ್ ಚಾಲಕ ಮತ್ತು ಅವರ ಸಹಾಯಕ ಮೃತಪಟ್ಟರೆ, ಮಾಲು ಸೇರಿದಂತೆ ಕಾರಿನಲ್ಲಿದ್ದ ಮೂವರು ಗಾಯಗೊಂಡಿದ್ದರು.
ಪ್ರಾಥಮಿಕ ವರದಿ ಪ್ರಕಾರ, ರಸ್ತೆಯಲ್ಲಿ ಅಡ್ಡಾದಿಡ್ಡಿಯಾಗಿ ಚಲಿಸುತ್ತಿದ್ದ ತೈಲ ಟ್ಯಾಂಕರ್ ಉಮ್ರಿ ಗ್ರಾಮದ ಬಳಿ ಕಾರಿಗೆ ಡಿಕ್ಕಿ ಹೊಡೆದಿದೆ.
ಎಫ್ಐಆರ್ ಪ್ರಕಾರ, ಹಿಂದಿನಿಂದ ಬಂದ ಕಾರು ತೈಲ ಟ್ಯಾಂಕರ್ನ ಮುಂಭಾಗದ ಟೈರ್ಗೆ ಡಿಕ್ಕಿ ಹೊಡೆದಿದೆ. ಈ ಕಾರಣದಿಂದಾಗಿ, ಟ್ಯಾಂಕರ್ ಪಲ್ಟಿಯಾಗಿದೆ ಎಂದು ಉಲ್ಲೇಖಿಸಲಾಗಿದೆ.
ಮಾಲು ಅವರು ಗುರುಗ್ರಾಮದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಬಿಡುಗಡೆಯಾದ ನಂತರ ಅವರ ಹೇಳಿಕೆ ಪಡೆಯಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.