ಬುಡಾನ್: ‘ಬಿಜೆಪಿಯ ಮುಖ್ಯ ಉದ್ದೇಶವೇ ಹಿಂದೂ ಹಾಗೂ ಮುಸ್ಲಿಮರ ನಡುವೆ ಜಗಳ ಹುಟ್ಟುಹಾಕುವುದು. ಆ ಮೂಲಕ ಚುನಾವಣೆ ಗೆಲ್ಲುವುದು. ಯಾವುದೇ ಸಮುದಾಯಗಳ ನಡುವೆ ವಿಷಬೀಜ ಬಿತ್ತುವುದೇ ಬಿಜೆಪಿಯ ರಾಜಕೀಯ ಬ್ರಹ್ಮಾಸ್ತ್ರ’ ಎಂದು ಸಮಾಜವಾದಿ ಪಕ್ಷದ ಮುಖಂಡ ಆಶುತೋಷ್ ವರ್ಮಾ ಪಟೇಲ್ ಆರೋಪಿಸಿದ್ದಾರೆ.
ಉತ್ತರಪ್ರದೇಶದ ಬುಡಾನ್ನಲ್ಲಿ ನಡೆದ ಜೋಡಿ ಕೊಲೆ ಪ್ರಕರಣಕ್ಕೆ ಧಾರ್ಮಿಕ ಥಳಕು ಹಾಕುವ ಮೂಲಕ ಸಮಾಜದಲ್ಲಿ ಅಶಾಂತಿ ಸೃಷ್ಟಿಸಿ ಲಾಭಗಳಿಸುವ ಕೊನೆಯ ಪ್ರಯತ್ನವನ್ನು ಬಿಜೆಪಿ ನಡೆಸುತ್ತಿದೆ ಎಂದು ದೂರಿದ್ದಾರೆ.
‘ದಂಗೆ ಎಬ್ಬಿಸಿ ಹಾಗೂ ಕೋಮು ಗಲಭೆ ಸೃಷ್ಟಿಸಿ ಚುನಾವಣೆಯಲ್ಲಿ ಗೆಲುವು ಸಾಧಿಸುವ ಯತ್ನವನ್ನು ಬಿಜೆಪಿ ನಡೆಸುತ್ತಿದೆ. ಹೀಗಾಗಿ ರಾಜ್ಯದಲ್ಲಿ ಇಂಥ ಘಟನೆಗಳು ನಡೆಯುತ್ತಿವೆ. ಜಿಲ್ಲೆಗಳಲ್ಲೂ ಕೋಮುಗಲಭೆಗಳು ಹೆಚ್ಚಾಗುತ್ತಿವೆ. ಇಂಥದ್ದೇ ಘಟನೆ ಬುಡಾನ್ನಲ್ಲೂ ನಡೆದಿದೆ’ ಎಂದು ಸಮಾಜವಾದಿ ಪಕ್ಷವು ತನ್ನ ಎಕ್ಸ್ ಖಾತೆಯಲ್ಲಿ ಆರೋಪಿಸಿದೆ.
‘ಜನರ ನೈಜ ಸಮಸ್ಯೆಗಳನ್ನು ಮುಂದಿಟ್ಟರೆ ಬಿಜೆಪಿ ಸೋಲಲಿದೆ. ಹೀಗಾಗಿ ಧಾರ್ಮಿಕ ಸಾಮರಸ್ಯ ಹದಗೆಡಿಸುವ ಮೂಲಕ ಮತಬೇಟೆ ಪ್ರಯತ್ನ ನಡೆಸುತ್ತಿದೆ. ಇದಕ್ಕಾಗಿಯೇ ಕೆಲ ಗೂಂಡಾಗಳು ಹಾಗೂ ದಂಗೆಕೋರರು ರಾಜ್ಯದಲ್ಲಿ ಮುಕ್ತವಾಗಿ ಸಂಚರಿಸುತ್ತಿದ್ದಾರೆ. ಅವರ ಕೆಲಸವೇ ಸಮಾಜದಲ್ಲಿ ಅಶಾಂತಿ ಸೃಷ್ಟಿಸುವುದಾಗಿದೆ’ ಎಂದಿದೆ.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಸರ್ಕಾರವನ್ನು ಟೀಕಿಸಿರುವ ಪಕ್ಷದ ಮುಖಂಡ, ‘ಯಾವುದೇ ಗಲಭೆಕೋರರು ಕಠಿಣ ಕ್ರಮ ಎದುರಿಸಲಿದ್ದಾರೆ ಎಂದು ಮುಖ್ಯಮಂತ್ರಿ ಎಚ್ಚರಿಕೆ ನೀಡಿದ್ದಾರೆ. ಆದರೆ ರಾಜ್ಯದಲ್ಲಿ ನಡೆದ ಹಲವು ಘಟನೆಗಳ ಕುರಿತ ರಾಜ್ಯ ಸರ್ಕಾರದ ನಿಲುವು ಹಾಗೂ ಕಾನೂನು ಜಾರಿ ಕುರಿತೇ ಹಲವು ಅನುಮಾನ ಮೂಡುತ್ತಿವೆ’ ಎಂದಿದ್ದಾರೆ.
ಬುಡಾನ್ನ ಬಾಬಾ ಕಾಲೊನಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
‘ಆರೋಪಿ ಸಾಜಿದ್ ಮಂಗಳವಾರ ಸಂಜೆ ತನ್ನ ಸೋದರ ಜಾವೇದ್ ಅವರ ಮನೆಯೊಳಗೆ ನುಗ್ಗಿ, ಮೇಲ್ಛಾವಣಿಯಲ್ಲಿ ಆಡುತ್ತಿದ್ದ ಅವರ ಇಬ್ಬರು ಮಕ್ಕಳನ್ನು ಕೊಲೆ ಮಾಡಿದ್ದಾನೆ. ಆತನನ್ನು ಹಿಡಿಯಲು ಜನರು ಪ್ರಯತ್ನಿಸಿದರೂ, ಆತ ತಪ್ಪಿಸಿಕೊಂಡಿದ್ದಾನೆ. ಪೊಲೀಸರು ಹಿಡಿಯುವ ಪ್ರಯತ್ನ ನಡೆಸಿದರೂ, ಅವರ ಮೇಲೂ ಆತ ಗುಂಡಿನ ದಾಳಿ ನಡೆಸಿದ್ದಾನೆ. ಇದಕ್ಕೆ ಪ್ರತಿಯಾಗಿ ಪೊಲೀಸರು ನಡೆಸಿದ ಎನ್ಕೌಂಟರ್ನಲ್ಲಿ ಸಾಜಿದ್ ಹತನಾಗಿದ್ದಾನೆ. ಕೃತ್ಯಕ್ಕೆ ಬಳಸಿದ ಮಾರಕಾಸ್ತ್ರ ಹಾಗೂ ರಿವಾಲ್ವರ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ₹5 ಸಾವಿರ ನೀಡುವಂತೆ ಜಾವೇದ್ಗೆ ಸಾಜಿದ್ ಬೇಡಿಕೆ ಇಟ್ಟಿದ್ದ ಎಂದು ಮೃತ ಮಕ್ಕಳ ಕುಟುಂಬದವರು ಹೇಳಿದ್ದಾರೆ. ಆರೋಪಿಯನ್ನು ಕೂಡಲೇ ಬಂಧಿಸಲಾಗುವುದು’ ಎಂದು ಪೊಲೀಸರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.