ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರು ವಿ.ವಿಗಳಿಗೆ ತಕ್ಷಣ ಕುಲಪತಿಗಳ ನೇಮಕ ಮಾಡಿ: ಸುಪ್ರೀಂ ಕೋರ್ಟ್

ಬಂಗಾಳದ ರಾಜ್ಯಪಾಲರಿಗೆ ‘ಸುಪ್ರೀಂ’ ನಿರ್ದೇಶನ * ಪರಿಗಣಿಸಿದ್ದಾರೆ –ಅಟಾರ್ನಿ ಜನರಲ್
Published 16 ಏಪ್ರಿಲ್ 2024, 23:30 IST
Last Updated 16 ಏಪ್ರಿಲ್ 2024, 23:30 IST
ಅಕ್ಷರ ಗಾತ್ರ

ನವದೆಹಲಿ: ‘ಮಮತಾ ಬ್ಯಾನರ್ಜಿ ನೇತೃತ್ವದ ರಾಜ್ಯ ಸರ್ಕಾರ ಶಿಫಾರಸು ಮಾಡಿರುವ ಪಟ್ಟಿಯಿಂದಲೇ ಆರು ಮಂದಿಯನ್ನು ವಿಶ್ವವಿದ್ಯಾಲಯಗಳ ಕುಲಪತಿಗಳನ್ನಾಗಿ ನೇಮಕ ಮಾಡಬೇಕು’ ಎಂದು ಪಶ್ಚಿಮ ಬಂಗಾಳದ ರಾಜ್ಯಪಾಲ ಸಿ.ವಿ.ಆನಂದ ಬೋಸ್ ಅವರಿಗೆ ಸುಪ್ರೀಂ ಕೋರ್ಟ್ ಮಂಗಳವಾರ ನಿರ್ದೇಶನ ನೀಡಿತು.

ರಾಜ್ಯಪಾಲರನ್ನು ಪ್ರತಿನಿಧಿಸಿದ್ದ ಅಟಾರ್ನಿ ಜನರಲ್ ಆರ್.ವೆಂಕಟರಮಣಿ ಅವರು, ‘ರಾಜ್ಯಪಾಲರು ರಾಜ್ಯ ಸರ್ಕಾರ ಕಳುಹಿಸಿದ್ದ ಪಟ್ಟಿಯಿಂದ ಆರು ಹೆಸರನ್ನು ಈಗಾಗಲೇ ಪರಿಗಣಿಸಿದ್ದಾರೆ’ ಎಂದು ಕೋರ್ಟ್‌ಗೆ ತಿಳಿಸಿದರು.

ಇದಕ್ಕೆ, ‘ಆರು ಜನರನ್ನು ತಕ್ಷಣವೇ ನೇಮಿಸಿ’ ಎಂದು ನ್ಯಾಯಮೂರ್ತಿಗಳಾದ ಸೂರ್ಯಕಾಂತ ಮತ್ತು ಕೆ.ವಿ.ವಿಶ್ವನಾಥನ್ ಅವರಿದ್ದ ಪೀಠವು ಸೂಚಿಸಿತು.

ಇತರೆ ವಿಶ್ವವಿದ್ಯಾಲಯಗಳಿಗೆ ಕುಲಪತಿಯಾಗಿ ನೇಮಿಸಲು ಇನ್ನಷ್ಟು ಹೆಸರುಗಳನ್ನು ವಿಶ್ವವಿದ್ಯಾಲಯದ ಕುಲಾಧಿಪತಿಯೂ ಆದ ರಾಜ್ಯಪಾಲರಿಗೆ ಕಳುಹಿಸಬೇಕು ಎಂದು ಪೀಠವು, ರಾಜ್ಯ ಸರ್ಕಾರಕ್ಕೂ ನಿರ್ದೇಶನ ನೀಡಿತು. 

ರಾಜ್ಯದಲ್ಲಿ ವಿಶ್ವವಿದ್ಯಾಲಯಗಳಿಗೆ ಕುಲಪತಿಯನ್ನು ನೇಮಕ ಮಾಡುವ ವಿಷಯವು ರಾಜ್ಯಪಾಲರು ಮತ್ತು ಸರ್ಕಾರದ ನಡುವೆ ಕೆಲ ತಿಂಗಳಿನಿಂದ ಸಂಘರ್ಷಕ್ಕೆ ಕಾರಣವಾಗಿತ್ತು.

‘ಈ ಸಂಘರ್ಷಕ್ಕೆ ಸೌಹಾರ್ದ ಪರಿಹಾರ ಸಿಗಲಿದೆ’ ಎಂದು ಆಶಿಸಿದ ಪೀಠವು, ‘ಕುಲಪತಿಯಾಗಿ ನೇಮಿಸಬೇಕಾದವರ ಹೆಸರು ಅಂತಿಮಗೊಳಿಸಲು ಶೋಧನಾ ಸಮಿತಿ ರಚಿಸುವ ಸಾಧ್ಯತೆಗಳನ್ನು ಪರಿಗಣಿಸಲಾಗುವುದು’ ಎಂದು ಹೇಳಿತು.

ಕುಲಪತಿ ಆಯ್ಕೆಗೆ ಶೋಧನಾ ಸಮಿತಿ ರಚಿಸಲು ತಲಾ ಐವರ ಹೆಸರು ಶಿಫಾರಸು ಮಾಡುವಂತೆ ಪೀಠವು ಇದಕ್ಕೂ ಮೊದಲು ರಾಜ್ಯಪಾಲರು, ರಾಜ್ಯ ಸರ್ಕಾರ ಮತ್ತು ವಿಶ್ವವಿದ್ಯಾಲಯ ಅನುದಾನ ಆಯೋಗಕ್ಕೆ (ಯುಜಿಸಿ) ತಿಳಿಸಿತ್ತು.

ಅರ್ಜಿ ವಿಚಾರಣೆ ಆರಂಭದಲ್ಲೇ ಅಟಾರ್ನಿ ಜನರಲ್ ಅವರು, ‘ಸರ್ಕಾರ ನೀಡಿರುವ ಪಟ್ಟಿಯಿಂದಲೇ ಆರು ಮಂದಿಯ ಹೆಸರನ್ನು ಕುಲಾಧಿಪತಿಗಳು ಪರಿಗಣಿಸಿದ್ದಾರೆ’ ಎಂಬುದನ್ನು ಪೀಠದ ಗಮನಕ್ಕೆ ತಂದರು.

ವಿಶ್ವವಿದ್ಯಾಲಯಕ್ಕೆ ಸಂಬಂಧಿಸಿದ ಮಸೂದೆಗೆ ರಾಜ್ಯಪಾಲರು ಉದ್ದೇಶಪೂರ್ವಕವಾಗಿ ಅನುಮೋದನೆ ನೀಡುತ್ತಿಲ್ಲ ಎಂದು ಸರ್ಕಾರವನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಅಭಿಷೇಕ್‌ ಸಿಂಘ್ವಿ ಪೀಠದ ಗಮನಕ್ಕೆ ತಂದರು. ಇದಕ್ಕೆ ಅಟಾರ್ನಿ ಜನರಲ್ ಅವರು ವಿರೋಧ ವ್ಯಕ್ತಪಡಿಸಿದರು. 

ವಸ್ತುಸ್ಥಿತಿ ಸ್ಪಷ್ಟವಾಗಿರುವ ಕಾರಣ ನಾನು ಈ ಬಗ್ಗೆ ಹೆಚ್ಚು ಹೇಳಲು ಬಯಸುವುದಿಲ್ಲ ಎಂದು ಪ್ರತಿಕ್ರಿಯಿಸಿದ ಅಟಾರ್ನಿ ಜನರಲ್, ರಾಜ್ಯ ಸರ್ಕಾರ ಅಸಹಕಾರ ತೋರುತ್ತಿದೆ ಎಂಬುದನ್ನು ಪರೋಕ್ಷವಾಗಿ ಉಲ್ಲೇಖಿಸಿದರು.

ಅಂತಿಮವಾಗಿ ಪ್ರಕರಣದ ಮುಂದಿನ ವಿಚಾರಣೆಯನ್ನು ಏಪ್ರಿಲ್‌ 30ಕ್ಕೆ ಸುಪ್ರೀಂ ಕೋರ್ಟ್ ನಿಗದಿಪಡಿಸಿತು.

ತಕ್ಷಣ ಆರು ಕುಲಪತಿಗಳ ನೇಮಕಕ್ಕೆ ಸೂಚನೆ  ಇನ್ನಷ್ಟು ಹೆಸರು ಶಿಫಾರಸಿಗೆ ಸರ್ಕಾರಕ್ಕೆ ಸಲಹೆ ಶೋಧನಾ ಸಮಿತಿ ರಚಿಸುವ ಸಾಧ್ಯತೆ ಪರಿಶೀಲನೆ

ಸರ್ಕಾರದ ಕ್ರಮಕ್ಕೆ ಬಿಜೆಪಿ ವಿರೋಧ ಕುಲಪತಿ ನೇಮಕಕ್ಕೆ ಶಿಫಾರಸು ಮಾಡಲು ರಚಿಸುವ ಶೋಧನಾ ಸಮಿತಿಯ ಸದಸ್ಯರ ಸಂಖ್ಯೆ ಹೆಚ್ಚಿಸಲು ಅವಕಾಶ ಕಲ್ಪಿಸುವ ತಿದ್ದುಪಡಿ ಮಸೂದೆಯನ್ನು ವಿಧಾನಸಭೆ ಅಂಗೀಕರಿಸಿತ್ತು. ಹೊಸ ಸಮಿತಿಗಳ ಮೂಲಕ ಆಡಳಿತ ಪಕ್ಷವು ಕುಲಪತಿಗಳ ನೇಮಕದ ಮೇಲೆ ನಿಯಂತ್ರಣ ಹೊಂದಲು ಬಯಸುತ್ತಿದೆ ಎಂದು ಬಿಜೆಪಿ ಇದನ್ನು ವಿರೋಧಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT