ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಂದ್ರಯಾನ: ಎನ್‌ಸಿಇಆರ್‌ಟಿಯಿಂದ ತಪ್ಪು ಮಾಹಿತಿ

Published 30 ಅಕ್ಟೋಬರ್ 2023, 16:10 IST
Last Updated 30 ಅಕ್ಟೋಬರ್ 2023, 16:10 IST
ಅಕ್ಷರ ಗಾತ್ರ

ನವದೆಹಲಿ: ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಮಂಡಳಿಯು (ಎನ್‌ಸಿಇಆರ್‌ಟಿ) ‘ಚಂದ್ರಯಾನ–3’ ಕುರಿತು ಈಚೆಗೆ ವಿದ್ಯಾರ್ಥಿಗಳಿಗಾಗಿ ಬಿಡುಗಡೆ ಮಾಡಿದ್ದ 10 ಕೈಪಿಡಿಗಳನ್ನು ಹಿಂಪಡೆಯಬೇಕು ಎಂದು ಕೆಲ ವಿಜ್ಞಾನಿಗಳು ಆಗ್ರಹಪಡಿಸಿದ್ದಾರೆ.

‘ಈ ಕೈಪಿಡಿಗಳಲ್ಲಿ ಸತ್ಯಕ್ಕೆ ದೂರವಾದ ವೈಜ್ಞಾನಿಕ ಮಾಹಿತಿಗಳಿವೆ. ‘ಹಾರುವ ರಥ’, ‘ವಿಮಾನಗಳು‘, ‘ವೈಮಾನಿಕ ಶಾಸ್ತ್ರ’ ಇತ್ಯಾದಿ ವೈಜ್ಞಾನಿಕವಾಗಿ ತಪ್ಪುಗ್ರಹಿಕೆಗೆ ಕಾರಣವಾಗುವ ಅಂಶಗಳಿವೆ’ ಎಂದೂ ಅವರು ಪ್ರತಿಪಾದಿಸಿದ್ದಾರೆ.

ಎನ್‌ಸಿಇಆರ್‌ಟಿ ‘ಚಂದ್ರಯಾನ ಉತ್ಸವ’ ಹೆಸರಿನಲ್ಲಿ ವಿವಿಧ ಶೀರ್ಷಿಕೆಗಳಲ್ಲಿ ಹತ್ತು ಕೈಪಿಡಿಗಳನ್ನು ಅ.17ರಂದು ಬಿಡುಗಡೆ ಮಾಡಿತ್ತು. ಅವುಗಳಲ್ಲಿ ತಪ್ಪುಗ್ರಹಿಕೆಗೆ ಆಸ್ಪದವಾಗುವ ಪುರಾಣದ ಉಲ್ಲೇಖಗಳಿವೆ ಎಂಬ ಟೀಕೆಗಳು ಕೇಳಿಬಂದ ಬಳಿಕ ಹಿಂಪಡೆದುಕೊಂಡಿತ್ತು.

‘ಪುರಾಣ ಮತ್ತು ತತ್ವಶಾಸ್ತ್ರಈ ಚಿಂತನೆಗಳಿಗೆ ಮೂಲವಾಗಿದ್ದವು. ಇವು ಹೊಸ ಸಂಶೋಧನೆ, ನಾವಿನ್ಯತೆಗೆ ಪ್ರೇರೇಪಣೆಯಾಗಿದ್ದವು’ ಎಂದು ಕೇಂದ್ರ ಸರ್ಕಾರವು ಕೈಪಿಡಿಗಳನ್ನು ಸಮರ್ಥನೆ ಮಾಡಿಕೊಂಡ ಮಂಡಳಿ ಅದನ್ನು ಮತ್ತೆ ಆನ್‌ಲೈನ್‌ನಲ್ಲಿ ಪ್ರಕಟಿಸಿತ್ತು. 

‘ವೈದಿಕ ಪಠ್ಯಗಳು, ಪುರಾಣಗಳಲ್ಲಿ ಉಲ್ಲೇಖವಾಗಿರುವ ಹಾರುವ ವಾಹನಗಳು ಕವಿಗಳ ಊಹೆಗಳಾಗಿದ್ದವು. ಬಹುತೇಕ ಎಲ್ಲ ಪುರಾಣಗಳಲ್ಲಿ ತಮ್ಮ ದೇವರು ಆಗಸದಲ್ಲಿ ಯಾನ ಮಾಡುತ್ತಿದ್ದರು ಎಂಬ ಉಲ್ಲೇಖ ಹೊಂದಿವೆ. ಆದರೆ, ಹಾರುವ ವಾಹನಗಳಿದ್ದವು ಎಂಬುದಕ್ಕೆ ಸಮರ್ಥನೆಯಾಗಿ ಯಾವುದೇ ಸಾಕ್ಷ್ಯಗಳಿಲ್ಲ’ ಎಂದು ಅಖಿಲ ಭಾರತ ಜನವಿಜ್ಞಾನ ನೆಟ್‌ವರ್ಕ್ ಹೇಳಿಕೆಯನ್ನು ನೀಡಿದೆ.

‘ಯೂರಿ ಗಾಗರಿನ್‌ 1961ರಲ್ಲಿ ಭೂಮಿಯಿಂದ ಅಂತರಿಕ್ಷಕ್ಕೆ ಯಾನಕೈಗೊಂಡಿದ್ದರು. ಅದಕ್ಕೆ ಮುನ್ನ ಮನುಷ್ಯ ಇಂತಹ ಯತ್ನ ನಡೆಸಿದ್ದಕ್ಕೆ ಸಾಕ್ಷ್ಯವಿಲ್ಲ‘ ಎಂದು ವಿಜ್ಞಾನಕ್ಕೆ ಸಂಬಂಧಿಸಿ ಸುಮಾರು 40 ಸಂಘಟನೆಗಳ ಒಕ್ಕೂಟ ಎಐಪಿಎಸ್‌ಎನ್‌ ಹೇಳಿದೆ.

ಹಿರಿಯ ವಿಜ್ಞಾನಿ, ಎಐಪಿಎಸ್‌ಎನ್‌ ಅಧ್ಯಕ್ಷರಾದ ಸತ್ಯಜಿತ್‌ ರತ್ ಅವರು, ‘ಇಂತಹ ಕೈಪಿಡಿಗಳ ವಿತರಣೆಯು ವಿದ್ಯಾರ್ಥಿಗಳ ಮೇಲೆ ಪ್ರತಿಕೂಲವಾದ ಪರಿಣಾಮಗಳನ್ನು ಉಂಟು ಮಾಡಲಿದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.

ವೈಮಾನಿಕ ಶಾಸ್ತ್ರ ಎಂಬ ಸಂಸ್ಕೃತ ಶೀರ್ಷಿಕೆಯ ಕೈಪಿಡಿಗೂ ಸಂಘಟನೆ ಆಕ್ಷೇಪ ವ್ಯಕ್ತಪಡಿಸಿದೆ. ಎನ್‌ಸಿಇಆರ್‌ಟಿ ಪ್ರಕಾರ, ‘ಈ ಕೈಪಿಡಿಯಲ್ಲಿ ನಿರ್ಮಾಣ, ಎಂಜಿನ್‌ಗಳ ಕಾರ್ಯನಿರ್ವಹಣೆ ಮತ್ತು ಭ್ರಮಣದರ್ಶಕ ವ್ಯವಸ್ಥೆ ಕುರಿತ ಕುತೂಹಲಕಾರಿ ವಿವರಗಳಿವೆ’.

ಎನ್‌ಸಿಇಆರ್‌ಟಿಯ ಕೈಪಿಡಿಯೊಂದರಲ್ಲಿ ‘ಚಂದ್ರನು ಸೌರಗಾಳಿಯಿಂದ ಭೂಮಿಯನ್ನು ರಕ್ಷಿಸುತ್ತಾನೆ’ ಹಾಗೂ ‘ಚಂದ್ರಯಾನ–2 ಚಂದ್ರನ ಅಂಗಳದಲ್ಲಿ ಮಂಜುಗಡ್ಡೆ ಪತ್ತೆಹಚ್ಚಿದೆ’ ಎಂಬ ಉಲ್ಲೇಖಗಳಿವೆ. ಇವು ತಪ್ಪು ಮಾಹಿತಿಯಾಗಿದೆ ಎಂದು ಸಂಘಟನೆ ಹೇಳಿದೆ.

ಇದರ ಹೊರತಾಗಿಯೂ ವೈಜ್ಞಾನಿಕ ಹಾಗೂ ವ್ಯಾಕರಣದ ಹಲವು ತಪ್ಪುಗಳು ಈ ಕೈಪಿಡಿಗಳಲ್ಲಿವೆ. ಇವುಗಳನ್ನು ಪ್ರಾಥಮಿಕ, ಮಾಧ್ಯಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ ಸಿದ್ಧಪಡಿಸಲಾಗಿದೆ ಎಂದು ಸಂಘಟನೆಯು ಹೇಳಿದೆ.

 

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT