ನವದೆಹಲಿ: ಹಿಮಾಲಯದಿಂದ ಬೀಸುತ್ತಿರುವ ಶೀತಗಾಳಿಯ ಪರಿಣಾಮ ಉತ್ತರ ಭಾರತದಲ್ಲಿ ಚಳಿಯ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಈ ಸಂದರ್ಭ ಮನೆಯಲ್ಲಿ ಅಥವಾ ವರ್ಷಾಂತ್ಯದ ಪಾರ್ಟಿಗಳಲ್ಲಿ ಕುಡಿತದ ಮೊರೆಹೋಗುವುದು ಒಳ್ಳೆಯದಲ್ಲ ಎಂದು ಭಾರತದ ಹವಾಮಾನ ಇಲಾಖೆ ಸಲಹೆ ನೀಡಿದೆ ಎಂದು ಎನ್ಡಿಟಿವಿ ವರದಿ ಮಾಡಿದೆ.
ಡಿಸೆಂಬರ್ 28 ರಿಂದ ಪಂಜಾಬ್, ಹರಿಯಾಣ, ದೆಹಲಿ, ಉತ್ತರ ಪ್ರದೇಶ ಮತ್ತು ಉತ್ತರ ರಾಜಸ್ಥಾನಗಳಲ್ಲಿ ತೀವ್ರ ಶೀತಗಾಳಿ ನಿರೀಕ್ಷಿಸಲಾಗಿದ್ದು, ಫ್ಲೂ, ನೆಗಡಿ, ಮೂಗಿನಲ್ಲಿ ರಕ್ತಸ್ರಾವದಂತಹ ವಿವಿಧ ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತವೆ. ದೀರ್ಘಕಾಲದಿಂದ ದೇಹ ಶೀತ ಅನುಭವಿಸುವುದರಿಂದ ಈ ಸಮಸ್ಯೆ ಉಂಟಾಗುತ್ತದೆ. ಹೀಗಾಗಿ, ಈ ಸಂದರ್ಭ ಮದ್ಯ ಸೇವನೆ ಮಾಡಬೇಡಿ. ಮದ್ಯವು ದೇಹದ ಉಷ್ಣಾಂಶವನ್ನು ಕುಗ್ಗಿಸುತ್ತದೆ ಎಂದು ಐಎಂಡಿ ಸಲಹೆ ನೀಡಿದೆ.