ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರವಣ ದೋಷವುಳ್ಳವರಿಗೆ ಕೋರ್ಟ್‌ ಕಲಾಪ ಅರ್ಥೈಸಿದ ಸಂವಹನಕಾರರು

Published 26 ಸೆಪ್ಟೆಂಬರ್ 2023, 23:05 IST
Last Updated 26 ಸೆಪ್ಟೆಂಬರ್ 2023, 23:05 IST
ಅಕ್ಷರ ಗಾತ್ರ

ನವದೆಹಲಿ: ಶ್ರವಣ ದೋಷವುಳ್ಳ ವ್ಯಕ್ತಿಗಳು ನ್ಯಾಯಾಲಯದ ಕಲಾಪಗಳನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗಬೇಕು ಎಂಬ ಉದ್ದೇಶದಿಂದ ದೆಹಲಿ ಹೈಕೋರ್ಟ್‌ ಮಂಗಳವಾರ, ಸಂಕೇತ ಭಾಷೆಯ (ಸಂಜ್ಞೆ ಭಾಷೆ) ಮೂಲಕ ಸಂವಹನ ನಡೆಸುವವರ ನೆರವು ಪಡೆದುಕೊಂಡಿತು. 

ಸಂಕೇತ ಭಾಷೆ ಮೂಲಕ ಸಂವಹನ ನಡೆಸುವ ಇಬ್ಬರು ವ್ಯಕ್ತಿಗಳು ನ್ಯಾಯಮೂರ್ತಿಯ ಸನಿಹದಲ್ಲಿ ನಿಂತು ಕಲಾಪವನ್ನು ಶ್ರವಣ ದೋಷವುಳ್ಳವರಿಗೆ ಸಂಕೇತ ಭಾಷೆಯಲ್ಲಿ ವಿವರಿಸಿದರು. ಹೈಕೋರ್ಟ್‌ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸಂವಹನಕಾರರ ನೆರವು ಪಡೆಯಲಾಗಿದೆ.

ವಾಕ್‌ ಮತ್ತು ಶ್ರವಣ ದೋಷವುಳ್ಳವರಿಗೂ ಚಿತ್ರಮಂದಿರ ಹಾಗೂ ಒಟಿಟಿ ವೇದಿಕೆಗಳಲ್ಲಿ ಮನರಂಜನೆ ಪಡೆಯಲು ಅವಕಾಶ ಕಲ್ಪಿಸಬೇಕು. ತಮಗೆ ಬಾಲಿವುಡ್‌ ನಟ ಶಾರುಕ್‌ ಖಾನ್ ನಟನೆಯ ‘ಪಠಾಣ್’ ಸಿನಿಮಾದ ಮನರಂಜನೆ ಸಿಗುವಂತೆಯೂ ಅವಕಾಶ ಕಲ್ಪಿಸಲು ಸರ್ಕಾರ ಹಾಗೂ ಸಂಬಂಧಪಟ್ಟವರಿಗೆ ಸೂಕ್ತ ನಿರ್ದೇಶನ ನೀಡುವಂತೆ ಕೋರಿ ವಾಕ್‌ ಮತ್ತು ಶ್ರವಣ ದೋಷವುಳ್ಳ ನಾಲ್ವರು ಅರ್ಜಿದಾರರು ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ. 

ನ್ಯಾಯಮೂರ್ತಿ ಪ್ರತಿಭಾ ಎಂ. ಸಿಂಗ್ ಅವರಿದ್ದ ಏಕಸದಸ್ಯ ನ್ಯಾಯಪೀಠವು ಈ ಅರ್ಜಿಯ ವಿಚಾರಣೆ ನಡೆಸಿತು.

‘ನ್ಯಾಯಾಲಯದಲ್ಲಿ ಈ ಅರ್ಜಿಗೆ ಸಂಬಂಧಿಸಿದಂತೆ ಮುಂದಿನ ದಿನಗಳಲ್ಲಿ ನಡೆಯುವ ಕಲಾಪಗಳನ್ನೂ ಸಂಕೇತ ಭಾಷೆ ಮೂಲಕವೇ ಅರ್ಜಿದಾರರಿಗೆ ಅರ್ಥೈಸಬೇಕು’ ಎಂದು ಸೂಚಿಸಿದ ನ್ಯಾಯಪೀಠವು, ‘ಸಂವಹನಕಾರರ ಶುಲ್ಕವನ್ನು ಅವರ ಬ್ಯಾಂಕ್‌ ಖಾತೆಗಳಿಗೆ ನೇರವಾಗಿ ಜಮೆ ಮಾಡಬೇಕು’ ಎಂದು ಸೂಚಿಸಿತು. 

ಶ್ರವಣ ದೋಷವುಳ್ಳ ಮೂವರು ಅರ್ಜಿದಾರರು ಹಾಗೂ ಅವರ ಪರ ವಕೀಲರಾದ ರಾಹುಲ್‌ ಬಜಾಜ್‌ ಅವರು ನ್ಯಾಯಾಲಯದಲ್ಲಿ ಹಾಜರಾಗಿ ಸಂಕೇತ ಭಾಷೆ ಮೂಲಕ ಕಲಾಪವನ್ನು ಅರ್ಥೈಸಿಕೊಂಡರು. ವಕೀಲ ಬಜಾಜ್‌ ಅವರು ದೃಷ್ಟಿದೋಷ ಹೊಂದಿದ್ದಾರೆ.

‌ಮುಂದಿನ ವಿಚಾರಣೆ ವೇಳೆ ನ್ಯಾಯಾಲಯದಿಂದಲೇ ಸಂವಹನಕಾರರ ನಿಯೋಜನೆಗೆ ರಿಜಿಸ್ಟ್ರಾರ್‌ ಜನರಲ್‌ ಕ್ರಮವಹಿಸಬಹುದು ಎಂದೂ ನ್ಯಾಯಪೀಠ ಹೇಳಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT