ಲಖನೌ: ಸಿಲ್ಕ್ಯಾರಾ ಸುರಂಗದಿಂದ ರಕ್ಷಿಸಲಾದ 41 ಕಾರ್ಮಿಕರೂ ಆರೋಗ್ಯವಾಗಿದ್ದು, ಋಷಿಕೇಶದಲ್ಲಿರುವ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ (ಏಮ್ಸ್) ವೈದ್ಯಕೀಯ ತಪಾಸಣೆಯ ಬಳಿಕ ಗುರುವಾರ ಅವರಿಗೆ ಮನೆಗೆ ತೆರಳಲು ಸೂಚಿಸಲಾಗಿದೆ.
ಮುನ್ನೆಚ್ಚರಿಕೆ ಕ್ರಮವಾಗಿ ಬುಧವಾರ ಅವರನ್ನು ಏಮ್ಸ್ಗೆ ದಾಖಲಿಸಿ, ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿತ್ತು. ‘ಕಾರ್ಮಿಕರ ರಕ್ತ ಪರೀಕ್ಷೆ, ಎಕ್ಸ್ ರೇ ಮತ್ತು ಇಸಿಜಿ ವರದಿಗಳು ಸಹಜವಾಗಿವೆ. ಮನೆಗೆ ತೆರಳುವಂತೆ ಸೂಚಿಸಲಾಗಿದೆ’ ಎಂದು ಏಮ್ಸ್ ಅಧಿಕಾರಿಯೊಬ್ಬರು ತಿಳಿಸಿದರು.
‘ಎರಡು ವಾರಗಳ ಬಳಿಕ ಮನೆಯ ಸಮೀಪದಲ್ಲಿರುವ ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆಗೆ ಒಳಗಾಗುವಂತೆಯೂ ಅವರಿಗೆ ಸಲಹೆ ನೀಡಲಾಗಿದೆ’ ಎಂದರು.
ಪ್ರಯಾಣಕ್ಕೆ ನೆರವಾಗುವ ಉದ್ದೇಶದಿಂದ ಕಾರ್ಮಿಕರ ತವರು ರಾಜ್ಯಗಳಿಂದ ಕೆಲವು ಅಧಿಕಾರಿಗಳು ಋಷಿಕೇಶಕ್ಕೆ ಬಂದಿದ್ದಾರೆ. ಎಲ್ಲ 41 ಕಾರ್ಮಿಕರ ಪ್ರಯಾಣ ವೆಚ್ಚವನ್ನು ಭರಿಸುವುದಾಗಿ ಉತ್ತರಾಖಂಡ ಸರ್ಕಾರ ಹೇಳಿದೆ.