ಚೆನ್ನೈ: ಆಹಾರ ಮತ್ತು ಅಗತ್ಯ ವಸ್ತುಗಳ ತೀವ್ರ ಕೊರತೆಯಿಂದಾಗಿ ಉತ್ತರ ಶ್ರೀಲಂಕಾದಲ್ಲಿ ತಮ್ಮ ಮನೆಗಳನ್ನು ತೊರೆದ ಒಂಬತ್ತು ಮಕ್ಕಳು ಸೇರಿದಂತೆ ಎಲ್ಲಾ 16 ತಮಿಳರನ್ನು ತಮಿಳುನಾಡು ಸರ್ಕಾರವು ರಾಮೇಶ್ವರ ಬಳಿಯ ಮಂಡಪಂನಲ್ಲಿರುವ ಪುನರ್ವಸತಿ ಶಿಬಿರದಲ್ಲಿ ಇರಿಸಿದೆ.
ಸೋಮವಾರ ಉತ್ತರದ ಮನ್ನಾರ್ನಿಂದ ಎರಡು ದೋಣಿಗಳಲ್ಲಿ ಹೊರಟಿದ್ದ ತಮಿಳರು, ಮಂಗಳವಾರ ರಾಮೇಶ್ವರ ತಲುಪಿದ್ದರು. ಅಲ್ಲಿನ ಸ್ಥಳೀಯ ನ್ಯಾಯಾಲಯವು ಆರು ಜನರನ್ನು ವಶಕ್ಕೆ ಪಡೆಯಲು ಆದೇಶಿಸಿತ್ತು. ಆದರೆ, ತಮಿಳುನಾಡು ಸರ್ಕಾರವು ಎಲ್ಲರನ್ನೂ ಮಾನವೀಯ ಆಧಾರದ ಮೇಲೆ ಮಂಡಪಂನ ಶಿಬಿರದಲ್ಲಿ ಇರಿಸಿದೆ.
‘ನಾವು ಶ್ರೀಲಂಕಾದ 16 ತಮಿಳಿಗರನ್ನು ರಾಮೇಶ್ವರ ಸಮೀಪದ ಶಿಬಿರದಲ್ಲಿ ಇರಿಸಿದ್ದೇವೆ. ಅವರಿಗೆ ಅಗತ್ಯವಿರುವ ಎಲ್ಲ ಸಹಾಯವನ್ನು ನೀಡಲಾಗಿದೆ. ವೈದ್ಯಕೀಯ ನೆರವನ್ನೂ ನೀಡಲಾಗುತ್ತಿದೆ. ಅವರ ಪ್ರವೇಶದ ಬಗ್ಗೆ ಕೇಂದ್ರ ಸರ್ಕಾರವು ನಿರ್ಧಾರ ತೆಗೆದುಕೊಳ್ಳುವವರೆಗೆ ಅವರನ್ನು ಚೆನ್ನಾಗಿ ನೋಡಿಕೊಳ್ಳಲಾಗುವುದು’ ಎಂದು ಅಲ್ಪಸಂಖ್ಯಾತರ ಕಲ್ಯಾಣ, ಅನಿವಾಸಿ ತಮಿಳರ ಕಲ್ಯಾಣ ಮತ್ತು ನಿರಾಶ್ರಿತರ ಸಚಿವ ಕೆ.ಎಸ್. ಮಸ್ತಾನ್ ಅವರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.