ಮುಂಬೈ: ಚಂದ್ರಯಾನ–3 ಕುರಿತಂತೆ ಸಾಮಾಜಿಕ ಮಾಧ್ಯಮದಲ್ಲಿ ವಿಡಂಬನಾತ್ಮಕ ಪೋಸ್ಟ್ಅನ್ನು ಹಂಚಿಕೊಂಡಿರುವ ಕಾರಣಕ್ಕೆ ಬಹುಭಾಷಾ ನಟ ಪ್ರಕಾಶ್ ರಾಜ್ ವಿರುದ್ಧ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಚಂದ್ರಯಾನ–3 ಬಾಹ್ಯಾಕಾಶ ನೌಕೆಯನ್ನು ಜುಲೈ 14ರಂದು ಉಡಾವಣೆ ಮಾಡಿತ್ತು. ಬುಧವಾರ(ಆಗಸ್ಟ್ 23) ನೌಕೆ ಚಂದ್ರನ ದಕ್ಷಿಣ ಧ್ರುವದ ಮೇಲೆ ಸಾಫ್ಟ್ ಲ್ಯಾಂಡಿಂಗ್ ಮಾಡಲಿದೆ.
ವ್ಯಕ್ತಿಯೊಬ್ಬ ಚಹಾ ಸುರಿಯುತ್ತಿರುವ ಕಾರ್ಟೂನ್ ಅನ್ನು ತಮ್ಮ ಎಕ್ಸ್(ಟ್ವಿಟರ್) ಖಾತೆಯಲ್ಲಿ ಹಂಚಿಕೊಂಡಿರುವ ಪ್ರಕಾಶ್ ರಾಜ್, ‘ಬ್ರೇಕಿಂಗ್ ನ್ಯೂಸ್:– ಚಂದ್ರನಿಂದ ವಿಕ್ರಮ್ ಲ್ಯಾಂಡರ್ ಕಳುಹಿಸಿರುವ ಮೊದಲ ಚಿತ್ರ. ವಾವ್ #justasking’ ಎಂದು ಬರೆದುಕೊಂಡಿದ್ದಾರೆ.
ನಟನ ಪೋಸ್ಟ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಚಂದ್ರಯಾನ–3 ಯೋಜನೆಯನ್ನು ಪರೋಕ್ಷವಾಗಿ ಅಣಕಿಸಿದ್ದಾರೆ ಎಂದು ಹೇಳಲಾಗಿದೆ.
’ಪ್ರಕಾಶ್ ರಾಜ್ ಅವರೆ.... ಚಂದ್ರಯಾನ–3 ಇಸ್ರೊದ ಯೋಜನೆಯಾಗಿದೆಯೇ ವಿನಃ ಬಿಜೆಪಿಯದಲ್ಲ. ಚಂದ್ರಯಾನ–3 ಯೋಜನೆ ದೇಶವೇ ಹೆಮ್ಮೆಪಡುವ ಒಂದು ವಿಷಯವಾಗಿದೆ. ರಾಜಕೀಯವನ್ನು ಇಲ್ಲಿಗೆ ತರಬೇಡಿ. ವಿಜ್ಞಾನಿಗಳನ್ನು ಗೌರವಿಸಿ’ ಎಂದು ನೆಟ್ಟಿಗರು ಹೇಳಿದ್ದಾರೆ.