ಸುಮಾರು 1,100ಕ್ಕೂ ಹೆಚ್ಚು ಭಕ್ತರನ್ನು ಹೊತ್ತ ರೈಲು ಜಮ್ಮು ರೈಲು ನಿಲ್ದಾಣದಿಂದ ಬೆಳಿಗ್ಗೆ 11.55ಕ್ಕೆ ಹೊರಟಿತು.
ಜನವರಿ 22ರಂದು ಅಯೋಧ್ಯೆಯ ರಾಮಮಂದಿರದಲ್ಲಿ ನಡೆದ ಬಾಲ ರಾಮ ಪ್ರಾಣ ಪ್ರತಿಷ್ಠಾಪನೆಯ ನಂತರ ಮೊದಲ ಬಾರಿಗೆ ದೊಡ್ಡ ಸಂಖ್ಯೆಯಲ್ಲಿ ರಾಮ ಭಕ್ತರು ಅಯೋಧ್ಯೆಗೆ ಭೇಟಿ ನೀಡುತ್ತಿದ್ದಾರೆ.
ರೈಲಿಗೆ ಚಾಲನೆ ನೀಡಿದ ನಂತರ ಮಾತನಾಡಿದ ಅಶೋಕ್ ಕೌಲ್, ‘ಇಲ್ಲಿರುವ ಎಲ್ಲರಿಗೂ ಅಭಿನಂದನೆಗಳು. ಜಮ್ಮುವಿನಿಂದ ಅಯೋಧ್ಯೆಗೆ ಚಾಲನೆಗೊಂಡ ಮೊದಲ ರೈಲು ಇದಾಗಿದೆ. ನಾಳೆ ಮತ್ತೊಂದು ರೈಲು ಅಯೋಧ್ಯೆಗೆ ಹೊರಡಲಿದೆ. ಜಮ್ಮುವಿನಿಂದ ಅಯೋಧ್ಯೆಗೆ ರೈಲುಗಳ ಓಡಾಟ ಮುಂದುವರಿಯಲಿದೆ’ ಎಂದರು.
ರಾಮ ಮಂದಿರ ನಿರ್ಮಾಣಕ್ಕಾಗಿ ಜಮ್ಮುವಿನ ಜನರ ಪ್ರಯತ್ನವನ್ನು ಶ್ಲಾಘಿಸಿದ ಕೌಲ್, ‘ರಾಮ ಮಂದಿರ ಬಾಲ ರಾಮನ ದರ್ಶನಕ್ಕಾಗಿ ಹೆಚ್ಚಿನ ಸಂಖ್ಯೆಯ ಜನರು ಅಯೋಧ್ಯೆಗೆ ಹೊರಟಿದ್ದಾರೆ. ಅವರಿಗೆ ಅಗತ್ಯವಿರುವ ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿದೆ’ ಎಂದು ತಿಳಿಸಿದ್ದಾರೆ.
ಜಮ್ಮು ರೈಲು ನಿಲ್ದಾಣದಲ್ಲಿ ನಡೆದ ಸಮಾರಂಭದಲ್ಲಿ ಭಾಗವಹಿಸಿದ್ದ ಭಕ್ತರು, ರಾಮ ಭಜನೆ ಮಾಡುವುದರ ಜತೆಗೆ ಜೈ ಶ್ರೀ ರಾಮ್ ಘೋಷಣೆಗಳನ್ನು ಕೂಗಿದರು.