ಲಖನೌ : ಮಧ್ಯಪ್ರದೇಶ ಮತ್ತು ರಾಜಸ್ಥಾನದ ರೈತರು ತಮ್ಮ ಹಸು ಹಾಗೂ ಎಮ್ಮೆಗಳು ದೊಡ್ಡಿಗಳಿಂದ ಹೋಗುತ್ತಿದ್ದರೂ ಹಿಡಿದುತರಲು ಪ್ರಯತ್ನಿಸದೇ ಸುಮ್ಮನೆ ಬಿಡುತ್ತಿರುವ ಕಾರಣ ಉತ್ತರ ಪ್ರದೇಶದಲ್ಲಿ ಬೀಡಾಡಿ ದನಗಳ ಕಾಟ ಹೆಚ್ಚಾಗಿದೆ!
ಉತ್ತರಪ್ರದೇಶದ ಸಂಸದೀಯ ವ್ಯವಹಾರಗಳ ಸಚಿವ ಸುರೇಶಕುಮಾರ್ ಖನ್ನಾ ವಿಧಾನಸಭೆಗೆ ಸೋಮವಾರ ನೀಡಿದ ಮಾಹಿತಿ ಇದು. ಕಾಂಗ್ರೆಸ್ನ ಶಾಸಕ ಅಜಯ್ ಕುಮಾರ್ ಲಲ್ಲು ಅವರು ಬೀಡಾಡಿ ದನಗಳ ಹಾವಳಿಗೆ ಸಂಬಂಧಿಸಿದಂತೆ ಕೇಳಿದ ಪ್ರಶ್ನೆಗೆ ಅವರು ಈ ಉತ್ತರವನ್ನು ನೀಡಿದರು.
‘ಬೀಡಾಡಿ ದನಗಳಿಂದ ಬೆಳೆಹಾನಿ ಆಗುತ್ತಿಲ್ಲವೇ’ ಎಂಬ ಪ್ರಶ್ನೆಗೆ, ಪಶುಸಂಗೋಪನಾ ಸಚಿವ ಲಕ್ಷ್ಮಿನಾರಾಯಣ ಚೌಧರಿ, ‘ಇಂತಹ ದತ್ತಾಂಶವನ್ನು ಇಲಾಖೆಯಿಂದ ಕ್ರೋಡೀಕರಣ ಮಾಡಿಲ್ಲ’ ಎಂದು ಉತ್ತರಿಸಿದರು.
‘ಮಧ್ಯ ಪ್ರದೇಶ ಮತ್ತು ರಾಜಸ್ಥಾನದಿಂದ ದನಗಳನ್ನು ತಂದು ಬಿಡುತ್ತಿರುವುದರಿಂದ ನಮ್ಮ ರಾಜ್ಯದಲ್ಲಿ ಏನೇ ವ್ಯವಸ್ಥೆ ಮಾಡಿದರೂ ಸಮಸ್ಯೆಯು ಮತ್ತಷ್ಟು ಕಗ್ಗಂಟಾಗುತ್ತಾ ಹೊರಟಿದೆ.ನಮ್ಮ ಸರ್ಕಾರಕ್ಕೆ ಕೆಟ್ಟು ಹೆಸರು ತರಲು ಅವರು ಹೀಗೆ ಮಾಡುತ್ತಿದ್ದಾರೆ’ ಎಂದೂ ದೂರಿದರು.
9,261 ದನ ಸಾವು
ಉತ್ತರ ಪ್ರದೇಶದ ಗೋಶಾಲೆಗಳಲ್ಲಿ ಕಳೆದ ವರ್ಷ ಒಟ್ಟಾರೆ 9,261 ದನಗಳು ಸಾವನ್ನಪ್ಪಿವೆ ಎಂದು ವಿಧಾನಸಭೆಗೆ ಮಾಹಿತಿ ನೀಡಲಾಯಿತು.
‘ಇಷ್ಟೊಂದು ದನಗಳ ಸಾವು ಸಂಭವಿಸಿದರೂ ಅಧಿಕಾರಿಗಳ ಮೇಲೆ ಕ್ರಮ ಕೈಗೊಂಡಿಲ್ಲವೇ’ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವ ಲಕ್ಷ್ಮಿನಾರಾಯಣ ಚೌಧರಿ, ‘ಅವುಗಳೆಲ್ಲ ಸಹಜವಾಗಿ ಸಂಭವಿಸಿದ ಸಾವುಗಳಾಗಿದ್ದರಿಂದ ಯಾರ ಮೇಲೂ ಕ್ರಮ ಕೈಗೊಂಡಿಲ್ಲ’ ಎಂದು ಉತ್ತರಿಸಿದರು.