ಚಿತ್ತೂರು (ಆಂಧ್ರಪ್ರದೇಶ): ಮೂಢನಂಬಿಕೆಯಿಂದ ಇಬ್ಬರು ಹೆಣ್ಣು ಮಕ್ಕಳನ್ನು ಕೊಲೆ ಮಾಡಿದ್ದ ದಂಪತಿಯನ್ನು ಮಾನಸಿಕ ಆರೋಗ್ಯ ಚಿಕಿತ್ಸೆಗಾಗಿ ತಿರುಪತಿಗೆ ಕರೆದೊಯ್ಯಲಾಗಿದೆ.
ಮಕ್ಕಳನ್ನು ಕೊಲೆ ಮಾಡಿದ್ದ ಆರೋಪದಡಿ ಬೋಧಕ ವೃತ್ತಿಯಲ್ಲಿದ್ದ ವಿ.ಪುರುಷೋತ್ತಮ ನಾಯ್ಡು ಮತ್ತು ಅವರ ಪತ್ನಿ ಪದ್ಮಜಾ ಅವರನ್ನು ಮದನಪಲ್ಲಿ ಠಾಣೆ ಪೊಲೀಸರು ಮಂಗಳವಾರ ಬಂಧಿಸಿದ್ದು, ಸದ್ಯ ದಂಪತಿ ನ್ಯಾಯಾಂಗ ಬಂಧನದಲ್ಲಿ ಇದ್ದಾರೆ.
ಮದನಪಲ್ಲಿ ಉಪ ಕಾರಾಗೃಹದ ಸೂಪರಿಂಟೆಂಡೆಂಟ್ ರಾಮಕೃಷ್ಣ ಯಾದವ್ ಅವರ ಪ್ರಕಾರ, ವೈದ್ಯರೊಬ್ಬರು ದಂಪತಿಯ ಆರೋಗ್ಯ ಪರಿಶೀಲಿಸಿದ್ದು, ಹೆಚ್ಚಿನ ತಪಾಸಣೆ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದ್ದರು ಎಂದು ಹೇಳಿದರು.
ವೈದ್ಯರ ಸಲಹೆಯನ್ನು ಸ್ಥಳೀಯ ನ್ಯಾಯಾಲಯಕ್ಕೆ ತಿಳಿಸಿದ್ದೆವು. ಕಾರಾಗೃಹ ಆಡಳಿತ ಸೂಕ್ತ ತೀರ್ಮಾನ ಕೈಗೊಳ್ಳಬಹುದು ಎಂದು ಕೋರ್ಟ್ ಹೇಳಿತ್ತು. ಅದರಂತೆ, ಚಿಕಿತ್ಸೆಗಾಗಿ ದಂಪತಿಯನ್ನು ತಿರುಪತಿಗೆ ಕರೆದೊಯ್ಯಲಾಗಿದೆ ಎಂದು ತಿಳಿಸಿದರು.