ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮರ ಕಡಿತದಿಂದ ‘ಕಾರ್ಬೆಟ್‌’ಗೆ ಹಾನಿ ಸರಿಪಡಿಸಲು ‘ಸುಪ್ರೀಂ’ ಆದೇಶ

ಕಾರ್ಬೆಟ್‌ ಹುಲಿ ಮೀಸಲು ಅರಣ್ಯಕ್ಕೆ ಆಗಿರುವ ಹಾನಿ ತಡೆಯುವ ಉದ್ದೇಶ
Published 7 ಮಾರ್ಚ್ 2024, 13:37 IST
Last Updated 8 ಮಾರ್ಚ್ 2024, 0:32 IST
ಅಕ್ಷರ ಗಾತ್ರ

ನವದೆಹಲಿ: ಅಕ್ರಮ ನಿರ್ಮಾಣ ಚಟುವಟಿಕೆಗಳು ಹಾಗೂ ಮರಗಳ ಹನನದಿಂದಾಗಿ ಕಾರ್ಬೆಟ್‌ ಹುಲಿ ಮೀಸಲು ಅರಣ್ಯಕ್ಕೆ ಆಗಿರುವ ಹಾನಿ ಕುರಿತು ಅಧ್ಯಯನ ನಡೆಸಿ, ಪರಿಹಾರ ಸೂಚಿಸುವುದಕ್ಕೆ ಸಂಬಂಧಿಸಿ ಸಮಿತಿ ರಚಿಸುವಂತೆ ಸುಪ್ರೀಂ ಕೋರ್ಟ್‌ ಆದೇಶಿಸಿದೆ.

‘ಅರಣ್ಯ, ಪರಿಸರ ಹಾಗೂ ಹವಾಮಾನ ಬದಲಾವಣೆ ಸಚಿವಾಲಯ ಈ ಸಮಿತಿ ರಚಿಸಬೇಕು. ಈ ಅರಣ್ಯ ಪ್ರದೇಶದ ಪರಿಸರಕ್ಕೆ ಆಗಿರುವ ಹಾನಿಯ ಅಂದಾಜು ಮಾಡುವ ಜೊತೆಗೆ, ಮರುಸ್ಥಾಪನೆಗೆ ತಗಲುವ ವೆಚ್ಚ ಕುರಿತು ವರದಿ ನೀಡಬೇಕು’ ಎಂದೂ ಸೂಚಿಸಿದೆ.

ಪರಿಸರ ಹೋರಾಟಗಾರ ಹಾಗೂ ವಕೀಲ ಗೌರವ್ ಬನ್ಸಾಲ್ ಎಂಬುವವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ, ನ್ಯಾಯಮೂರ್ತಿಗಳಾದ ಬಿ.ಆರ್‌.ಗವಾಯಿ, ಪಿ.ಕೆ.ಮಿಶ್ರಾ ಹಾಗೂ ಸಂದೀಪ್‌ ಮೆಹ್ತಾ ಅವರಿದ್ದ ನ್ಯಾಯಪೀಠ, ಈ ಆದೇಶ ನೀಡಿದೆ.

‘ಈ ಮೀಸಲು ಅರಣ್ಯದ ಬಫರ್‌ ಅಥವಾ ಅಂಚಿನ ಪ್ರದೇಶದಲ್ಲಿ ಹುಲಿ ಸಫಾರಿಗೆ ಅನುಮತಿ ನೀಡಬಹುದೇ? ಒಂದು ವೇಳೆ, ಅನುಮತಿ ನೀಡಬೇಕು ಎಂದಾದಲ್ಲಿ ಯಾವ ಮಾರ್ಗಸೂಚಿಗಳನ್ನು ಅನುಸರಿಸಬೇಕು ಎಂಬ ಪ್ರಶ್ನೆಗಳನ್ನು ಕೂಡ ಸಮಿತಿ ಅಧ್ಯಯನ ವೇಳೆ ಪರಿಗಣಿಸಬೇಕು’ ಎಂದು ನ್ಯಾಯಪೀಠ ಹೇಳಿದೆ.

‘ಈ ಮೀಸಲು ಅರಣ್ಯದಲ್ಲಿನ ಹಾನಿಗೆ ಕಾರಣರಾದ ವ್ಯಕ್ತಿಗಳು/ಅಧಿಕಾರಿಗಳನ್ನು ಗುರುತಿಸಬೇಕು. ಈ ಹಾನಿಗೆ ಸಂಬಂಧಿಸಿ ನಿಗದಿ ಮಾಡಲಾದ ಮೊತ್ತವನ್ನು ಆ ವ್ಯಕ್ತಿಗಳು/ಕರ್ತವ್ಯಲೋಪ ಎಸಗಿರುವ ಅಧಿಕಾರಿಗಳಿಂದ ವಸೂಲಿ ಮಾಡಬೇಕು. ಈ ರೀತಿ ವಸೂಲಿ ಮಾಡಲಾದ ಮೊತ್ತವನ್ನು ಪರಿಸರ ಮರುಸ್ಥಾಪನೆಗಾಗಿಯೆ ಬಳಸಿಕೊಳ್ಳಬೇಕು’ ಎಂದು ನ್ಯಾಯಪೀಠ ಹೇಳಿದೆ.

‘ಸುಪ್ರೀಂ’ ಆದೇಶದಲ್ಲಿನ ಪ್ರಮುಖ ಅಂಶಗಳು

* ಸಮಿತಿಯು ರಾಷ್ಟ್ರೀಯ ಹುಲಿ ಸಂರಕ್ಷಣೆ ಪ್ರಾಧಿಕಾರ, ಭಾರತೀಯ ವನ್ಯಜೀವಿ ಸಂಸ್ಥೆ, ಕೇಂದ್ರೀಯ ಉನ್ನತಾಧಿಕಾರ ಸಮಿತಿಯಿಂದ ತಲಾ ಒಬ್ಬ ಪ್ರತಿನಿಧಿಯನ್ನು ಒಳಗೊಂಡಿರಬೇಕು. ಪರಿಸರ ಸಚಿವಾಲಯ ಸೂಚಿಸುವ, ಜಂಟಿ ಕಾರ್ಯದರ್ಶಿಗಿಂತ ಕಡಿಮೆ ಇರದ ಶ್ರೇಣಿಯ ಅಧಿಕಾರಿಯು ಸದಸ್ಯ ಕಾರ್ಯದರ್ಶಿಯಾಗಿರಬೇಕು

* ಕಾರ್ಬೆಟ್‌ ಹುಲಿ ಮೀಸಲು ಅರಣ್ಯದ ಬಫರ್‌ ಮತ್ತು ಅಂಚಿನ ಪ್ರದೇಶಗಳಲ್ಲಿ ಯಾವ ಬಗೆಯ ಚಟುವಟಿಕೆಗಳಿಗೆ ಅವಕಾಶ ನೀಡಬೇಕು ಹಾಗೂ ನಿಷೇಧ ಹೇರಬೇಕು ಎಂಬ ಬಗ್ಗೆ ಸಮಿತಿ ಶಿಫಾರಸು ಮಾಡಬೇಕು

* ಒಂದುವೇಳೆ, ಈ ಮೀಸಲು ಅರಣ್ಯದಲ್ಲಿ ಪ್ರವಾಸೋದ್ಯಮಕ್ಕೆ ಅವಕಾಶ ನೀಡಬೇಕು ಎಂದಾದಲ್ಲಿ, ಅದು ಪರಿಸರ ಪ್ರವಾಸವೇ ಆಗಿರತಕ್ಕದ್ದು

*  ಮೀಸಲು ಅರಣ್ಯದ ಸಮೀಪದಲ್ಲಿ ಯಾವ ರೀತಿಯ ಮತ್ತು ಎಷ್ಟು ಸಂಖ್ಯೆಯ ರೆಸಾರ್ಟ್‌ಗಳಿಗೆ ಅನುಮತಿ ನೀಡಬೇಕು. ಪರಿಸರ ವ್ಯವಸ್ಥೆಯ ಸಂರಕ್ಷಣೆ ಹಾಗೂ ನಿರ್ವಹಣೆ ಉದ್ದೇಶದ ಹಿನ್ನೆಲೆಯಲ್ಲಿ ರೆಸಾರ್ಟ್‌ಗಳ ಮೆಲೆ ಯಾವ ಬಗೆಯ ನಿರ್ಬಂಧಗಳನ್ನು ವಿಧಿಸಬೇಕು ಎಂಬ ಬಗ್ಗೆ ಸಮಿತಿ ಸಲಹೆ ನೀಡಬೇಕು

* ಈ ಮೀಸಲು ಅರಣ್ಯ ಪ್ರದೇಶದಲ್ಲಿ ಶಬ್ದ ಮಾಲಿನ್ಯ ತಡೆಗಟ್ಟಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಶಿಫಾರಸು ಮಾಡಬೇಕು

* ಹುಲಿ ಮೀಸಲು ಅರಣ್ಯಗಳ ಸಂರಕ್ಷಣೆ ಹಾಗೂ ನಿರ್ವಹಣೆ ಕುರಿತು ಉದ್ದೇಶಿತ ಸಮಿತಿಯ ಶಿಫಾರಸಿನಂತೆ ಕೈಗೊಳ್ಳುವ ಕ್ರಮಗಳು ದೇಶದಾದ್ಯಂತ ಅನ್ವಯವಾಗುವಂತೆ ಇರಬೇಕು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT