ಶ್ರೀನಗರ (ಪ್ರಜಾವಾಣಿ ವಾರ್ತೆ): ಜಮ್ಮು ಕಾಶ್ಮೀರದ ಗಡಿಭಾಗದ ಪೂಂಚ್ ಜಿಲ್ಲೆಯ ಕವಾರಿಯನ್ ಪ್ರದೇಶದಲ್ಲಿ ಉಗ್ರರು ಸೇನಾ ವಾಹನದ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ ಎಂದು ಗುರುವಾರ ಸಂಜೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಅಥವಾ ಗಾಯಗೊಂಡವರ ಬಗ್ಗೆ ವರದಿಯಾಗಿಲ್ಲ ಎಂದು ಅವರು ಹೇಳಿದ್ದಾರೆ.
ಕೃಷ್ಣ ಘಾಟಿ ಮತ್ತು ಝಲ್ಲಾಸ್ ನಡುವಿನ ಪೂಂಚ್–ಮೆಂದಾರ್ ರಸ್ತೆಯ ಗಡಿ ನಿಯಂತ್ರಣ ರೇಖೆಯ ಬಳಿ ಉಗ್ರರು ಸೇನಾ ವಾಹನದ ಮೇಲೆ ಗುಂಡಿನ ದಾಳಿ ಆರಂಭಿಸಿದರು. ಘಟನೆ ನಡೆದ ತಕ್ಷಣ ರಕ್ಷಣಾ ಪಡೆಗಳು ಪೂಂಚ್–ಮೆಂದಾರ್ ರಸ್ತೆಯನ್ನು ಬಂದ್ ಮಾಡಿ ಉಗ್ರರಿಗಾಗಿ ಹುಡುಕಾಟ ನಡೆಸಿದವು.
ಕಾಶ್ಮೀರ ಭಾಗದಲ್ಲಿ ಉಗ್ರಗಾಮಿ ಕೃತ್ಯಗಳು ಕಡಿಮೆಯಾಗುತ್ತಿದ್ದು, ಉಗ್ರರು ರಾಜೌರಿ ಮತ್ತು ಪೂಂಚ್ (ಪಿರ್ ಪಂಜಾಲ್ ಪ್ರದೇಶ) ನತ್ತ ಗಮನ ಕೇಂದ್ರೀಕರಿಸಿದ್ದಾರೆ. ಆ ಪ್ರದೇಶದಲ್ಲಿರುವ ದಟ್ಟ ಕಾಡುಗಳು ಮತ್ತು ಬೆಟ್ಟಗುಡ್ಡಗಳು ಉಗ್ರರಿಗೆ ರಕ್ಷಣೆ ಒದಗಿಸುತ್ತಿವೆ.