ಉತ್ತರಕಾಶಿ: ಸಿಲ್ಕ್ಯಾರಾ ಸುರಂಗದಲ್ಲಿ 17 ದಿನ ಸಿಲುಕಿದ್ದ 41 ಕಾರ್ಮಿಕರನ್ನು ಯಶಸ್ವಿಯಾಗಿ ರಕ್ಷಿಸಲಾಗಿದ್ದು, ರಕ್ಷಣಾ ಪಡೆಗಳ ಕಾರ್ಯಾಚರಣೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಭಾರಿ ಯಂತ್ರಗಳನ್ನು ಬಳಸಿ ರಕ್ಷಣಾ ಕಾರ್ಯಾಚರಣೆ ನಡೆಸುವ ಯೋಜನೆ ಕೊನೆ ಹಂತದಲ್ಲಿ ಕೈ ಕೊಟ್ಟಿದ್ದರಿಂದ ಇಲಿ ಬಿಲ ಸುರಂಗ ಪರಿಣತರಿಂದ (Rat Hole Mining) ಸುರಂಗ ಕೊರೆದು 41 ಕಾರ್ಮಿಕರನ್ನು ಹೊರ ತರಲಾಯಿತು.
ವಿಶೇಷವೆಂದರೆ ಕಾರ್ಮಿಕರನ್ನು ಕರೆತರಲು ಹೋಗಿದ್ದ ಇಲಿ ಬಿಲ ಸುರಂಗ ಪರಿಣಿತ ಮೂವರು, ಎಲ್ಲ ಕಾರ್ಮಿಕರನ್ನು ಹೊರ ಕಳುಹಿಸಿದ ಮೇಲೆಯೆ ಎನ್ಡಿಆರ್ಎಫ್ ಸಿಬ್ಬಂದಿ ಜೊತೆ ಹೊರ ಬಂದಿದ್ದಾರೆ.
ಕಾರ್ಯಾಚರಣೆ ಮುಗಿದ ನಂತರ ಪಿಟಿಐ ಸುದ್ದಿಸಂಸ್ಥೆ ಜೊತೆ ಮಾಹಿತಿ ಹಂಚಿಕೊಂಡಿರುವ ಇಲಿ ಬಿಲ ಪರಿಣಿತ ದೆಹಲಿಯ ಖಜೂರಿ ಖಾಸ್ ಪ್ರದೇಶದ ಫೈರೂಜ್ ಖುರೇಶಿ ಹಾಗೂ ಉತ್ತರಪ್ರದೇಶದ ಬುಲಂದ್ಶಹರ್ನ ಮೋನು ಕುಮಾರ್, ‘ಕೊನೆ ಹಂತದಲ್ಲಿ ನಾವು ಸುರಂಗ ಕೊರೆದು ಒಳ ಹೋದಾಗ ಕಾರ್ಮಿಕರು ನಮ್ಮನ್ನು ಹೆಗಲ ಮೇಲೆ ಹೊತ್ತು ಕುಣಿದರು’ ಎಂದು ಸಂತಸದಿಂದ ಹೇಳಿದರು.