ಲಖನೌ: ಸಮಾಜವಾದಿ ಪಕ್ಷದ ಹಿಂದುಳಿದ ವರ್ಗಗಳ ಹಿರಿಯ ನಾಯಕ ಸ್ವಾಮಿ ಪ್ರಸಾದ್ ಮೌರ್ಯ ಅವರನ್ನು ಗುರಿಯಾಗಿಸಿಕೊಂಡು ಚಪ್ಪಲಿ ಎಸೆದಿದ್ದಾರೆಂದು ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಸಮಾವೇಶವನ್ನು ಹಾಳು ಮಾಡಲು, ಹಿಂದುಳಿದ ವರ್ಗದ ನಾಯಕರಿಗೆ ಅಗೌರವ ತೋರಲು ಬಿಜೆಪಿ ಸೂಚನೆ ಮೇರೆಗೆ ಈ ಘಟನೆ ನಡೆದಿದೆ ಅಖಿಲೇಶ್ ಯಾದವ್ ಆರೋಪಿಸಿದ್ದಾರೆ.
ಶೂನ್ಯ ಸಹಿಷ್ಣುತೆ ಬಗ್ಗೆ ಮಾತನಾಡುತ್ತಾರೆ, ಆದರೆ ಇಲ್ಲಿ ಯಾವುದೇ ಸಹಿಷ್ಣುತೆಯ ಭಾವನೆ ಇಲ್ಲ. ಯಾರೊಬ್ಬರು ಕಾರ್ಯಕ್ರಮಕ್ಕೆ ಬಂದು ಹಿರಿಯ ನಾಯಕರಿಗೆ ಅಗೌರವ ತೋರಿದ್ದಾರೆ. ನಾವು ಜನಪ್ರತಿನಿಧಿಗಳು, ಜನರಿಗೆ ಉತ್ತರ ನೀಡಬೇಕಾದವರು, ಆದರೆ ನಾವೇ ಸುರಕ್ಷಿತವಾಗಿಲ್ಲ. ಹೀಗಿದ್ದಾಗ ಜನರಿಗೆ ಏನೆಂದು ಉತ್ತರಿಸುವುದು ಎಂದು ಪ್ರಶ್ನಿಸಿದ್ದಾರೆ.
ರಾಜ್ಯ ಸರ್ಕಾರವು ನಾಯಕರಿಗೆ ಭದ್ರತೆ ಒದಗಿಸಬೇಕೆಂದು ಅಖಿಲೇಶ್ ತಿಳಿಸಿದ್ದಾರೆ.
ನಗರದಲ್ಲಿ ಸೋಮವಾರ ನಡೆದ ಹಿಂದುಳಿದ ವರ್ಗಗಳ ಸಮಾವೇಶದಲ್ಲಿ ಮೌರ್ಯ ಅವರ ಮೇಲೆ ಅಪರಿಚಿತ ವ್ಯಕ್ತಿಯೊಬ್ಬರು ಚಪ್ಪಲಿ ಎಸೆದಿದ್ದರು. ಆರೋಪಿಯನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ ಎಂದು ಎನ್ಡಿ ಟಿವಿ ವರದಿ ಮಾಡಿದೆ.
2022ರ ಉತ್ತರ ಪ್ರದೇಶದ ವಿಧಾನ ಸಭಾ ಚುನಾವಣೆಗೂ ಮೊದಲು ಸ್ವಾಮಿ ಪ್ರಸಾದ್ ಮೌರ್ಯ ಬಿಜೆಪಿಯಿಂದ ಸಮಾಜವಾದಿ ಪಕ್ಷಕ್ಕೆ ಸೇರ್ಪಡೆಗೊಂಡರು.