ಅಮರಾವತಿ: ಆಂಧ್ರಪ್ರದೇಶ ಸರ್ಕಾರವು ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಮಂಡಳಿಗೆ ಬೆಂಗಳೂರಿನ ಶಾಸಕ ಎಸ್.ಆರ್.ವಿಶ್ವನಾಥ, ಶಿವಸೇನಾ ಕಾರ್ಯದರ್ಶಿ ಮಿಲಿಂದ ಕೇಶವ ನರ್ವೇಕರ್, ಬಿಸಿಸಿಐ ಮಾಜಿ ಅಧ್ಯಕ್ಷ ಎನ್. ಶ್ರೀನಿವಾಸನ್ ಸೇರಿದಂತೆ 52 ವಿಶೇಷ ಆಹ್ವಾನಿತರನ್ನು ನಾಮ ನಿರ್ದೇಶನ ಮಾಡಿದೆ.
ಅಧ್ಯಕ್ಷರು, 24 ಸಾಮಾನ್ಯ ಸದಸ್ಯರು ಮತ್ತು ನಾಲ್ವರು ಪದನಿಮಿತ್ತ ಸದಸ್ಯರನ್ನು ಒಳಗೊಂಡಿರುವ ಮಂಡಳಿಯ ಒಟ್ಟಾರೆ ಸದಸ್ಯರ ಸಂಖ್ಯೆ ಇದೀಗ 81ಕ್ಕೆ ಏರಿದಂತಾಗಿದೆ.
ಮೂರು ಪ್ರತ್ಯೇಕ ಆದೇಶಗಳನ್ನು ಬುಧವಾರ ರಾತ್ರಿ ಹೊರಡಿಸುವ ಮೂಲಕ ಸರ್ಕಾರ ಮಂಡಳಿ ಸದಸ್ಯರ ಸಂಖ್ಯೆಯನ್ನು ಭಾರಿ ಗಾತ್ರದಲ್ಲಿ ಹೆಚ್ಚಿಸಿದೆ.
ಟಿಟಿಡಿಯ ಸಾಮಾಜಿಕ, ಆರ್ಥಿಕ, ಧಾರ್ಮಿಕ ಮತ್ತು ಪರಿಸರದ ವಾತಾವರಣವನ್ನು ರಕ್ಷಿಸಲು ಹಾಗೂ ಭಕ್ತರು ಮತ್ತು ಭಕ್ತರ ಕಲ್ಯಾಣ ತತ್ವಗಳನ್ನು ಪಾಲಿಸಲು ಭಾರಿ ಗಾತ್ರದ ಮಂಡಳಿಯ ಅಗತ್ಯವಿದೆ ಎಂದು ಸರ್ಕಾರ ಸಮರ್ಥಿಸಿಕೊಂಡಿದೆ.