ನವದೆಹಲಿ: ದೆಹಲಿಯಲ್ಲಿ ಶುಕ್ರವಾರ ರಾತ್ರಿ ಬೀಸಿದ ಬಿರುಗಾಳಿಗೆ ಕನಿಷ್ಠ ಇಬ್ಬರು ಸಾವಿಗೀಡಾಗಿ, 23 ಮಂದಿ ಗಾಯಗೊಂಡಿದ್ದಾರೆ. ಬಲವಾದ ಗಾಳಿಯಿಂದಾಗಿ ಮರಗಳು ಬುಡಸಮೇತ ಕಿತ್ತು ಬಂದಿದ್ದು, ವಿದ್ಯುತ್ ಕಂಬಗಳು ಧರಾಶಾಹಿಯಾಗಿವೆ.
ರಾಜಧಾನಿಯ ಹಲವು ಭಾಗಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿದ್ದು, ಗಾಳಿ ಹೊತ್ತುತಂದ ದೂಳು ಜನರಿಗೆ ತೊಂದರೆಯುಂಟು ಮಾಡಿದೆ.
ಪಶ್ಚಿಮ ದೆಹಲಿಯ ವಿಕಾಸ್ಪುರಿಯ ಜನಕಪುರಿ ಫ್ಳೈ ಓವರ್ ಬಳಿ ದ್ವಿಚಕ್ರ ವಾಹನದ ಮೇಲೆ ಮರದ ಕೊಂಬೆ ಬಿದ್ದು ಸವಾರ ಸಾವಿಗೀಡಾಗಿದ್ದಾನೆ. ಜೈಪ್ರಕಾಶ್ ಎಂಬವರೇ ಮೃತ ವ್ಯಕ್ತಿ.
ಕ್ರೇನ್ಗಳ ಸಹಾಯದಿಂದ ಕೊಂಬೆಯನ್ನು ತೆಗೆದು, ಸವಾರನನ್ನು ದೀನ್ ದಯಾಳ್ ಉಪಾಧ್ಯಾಯ ಆಸ್ಪತ್ರೆಗೆ ಸೇರಿಸಲಾಯಿತಾದರೂ, ಬದುಕುಳಿಯಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಘಟನೆಯಲ್ಲಿ ಕಾರೊಂದಕ್ಕೆ ಹಾನಿ ಸಂಭವಿಸಿದೆ. ಅದರಲ್ಲಿ ಪ್ರಯಾಣಿಸುತ್ತಿದ್ದವರಿಗೆ ಯಾವುದೇ ಗಾಯವಾಗಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಕೆ.ಎನ್ ಕಾಡ್ಜು ರಸ್ತೆಯ ಐಬಿ ಬ್ಲಾಕ್ ಸಮೀಪ ಮರದ ಕೆಳಗೆ ನಿಂತಿದ್ದ ಹರಿ ಓಂ ಎಂಬ ಕಾರ್ಮಿಕರ ಮೇಲೆ ಕೊಂಬೆ ಬಿದ್ದು ಸಾವಿಗೀಡಾಗಿದ್ದಾರೆ. ರಾತ್ರಿ 11 ಗಂಟೆ ವೇಳೆಗೆ ಈ ಘಟನೆ ನಡೆದಿದೆ.
ಮರ, ವಿದ್ಯುತ್ ಕಂಬ ಹಾಗೂ ಹೋರ್ಡಿಂಗ್ಗಳು ಬಿದ್ದಿರುವುದರ ಬಗ್ಗೆ 152 ಕರೆಗಳು ತುರ್ತು ಸಹಾಯವಾಣಿಗೆ ಬಂದಿವೆ. ಕಟ್ಟಡಗಳು ಭಾಗಶಃ ಕುಸಿದಿರುವುದರ ಬಗ್ಗೆ 55 ಕರೆಗಳು, ವಿದ್ಯುತ್ ವ್ಯತ್ಯಯ ಬಗ್ಗೆ 202 ಕರೆಗಳು ಬಂದಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೆಟ್ಟ ಹವಾಮಾನದಿಂದಾಗಿ 9 ವಿಮಾನಗಳ ಮಾರ್ಗವನ್ನೂ ಬದಲಿಸಲಾಗಿದೆ.
Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.