ಮುಂಬೈ: ಭೂಗತ ಪಾತಕಿ ದಾವೂದ್ ಇಬ್ರಾಹಿಂ ಕುಟುಂಬದ ಸದಸ್ಯರಿಗೆ ಸೇರಿದ ಎರಡು ನಿವೇಶನಗಳು ಶುಕ್ರವಾರ ನಡೆದ ಹರಾಜು ಪ್ರಕ್ರಿಯೆಯಲ್ಲಿ ₹2 ಕೋಟಿಗೂ ಹೆಚ್ಚಿನ ಮೊತ್ತಕ್ಕೆ ಮಾರಾಟವಾಗಿವೆ.
ಕಳ್ಳಸಾಗಣೆದಾರರು ಮತ್ತು ವಿದೇಶಿ ವಿನಿಮಯ ಅಕ್ರಮ ಕಾಯ್ದೆಯಡಿ ಸಕ್ಷಮ ಪ್ರಾಧಿಕಾರವು ಈ ಹರಾಜು ಪ್ರಕ್ರಿಯೆಯನ್ನು ನಡೆಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ದಾವೂದ್ ಇಬ್ರಾಹಿಂ ಅವರ ಪೂರ್ವಜರು ಇದ್ದ ರತ್ನಗಿರಿ ಜಿಲ್ಲೆಯ ಮುಂಬಾಕೆ ಗ್ರಾಮದಲ್ಲಿರುವ ನಾಲ್ಕು ಆಸ್ತಿಗಳ ಹರಾಜಿನಲ್ಲಿ ₹15,540ಕ್ಕೆ ಮೀಸಲಾಗಿದ್ದ ಆಸ್ತಿಯು ₹2.01 ಕೋಟಿಗೆ ಬಿಕರಿಯಾಯಿತು. ಮತ್ತೊಂದು ನಿವೇಶನವು ₹3.28 ಲಕ್ಷಕ್ಕೆ ಮಾರಾಟವಾಗಿದೆ. ಎರಡು ಆಸ್ತಿಗಳಿಗೆ ಯಾವುದೇ ಬಿಡ್ ಸಲ್ಲಿಕೆಯಾಗಲಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
ಈ ಹರಾಜಿನಲ್ಲಿ ಒಬ್ಬ ವ್ಯಕ್ತಿಯೇ ಎರಡು ಆಸ್ತಿಗಳನ್ನು ಖರೀದಿಸಿದ್ದಾರೆ. ಆದರೆ, ಖರೀದಾರರ ಹೆಸರನ್ನು ಬಹಿರಂಗಪಡಿಸಿಲ್ಲ. ಆದಾಗ್ಯೂ, ದೆಹಲಿ ಮೂಲದ ವಕೀಲರೊಬ್ಬರು ಈ ಆಸ್ತಿಗಳನ್ನು ಖರೀದಿಸಿದ್ದಾರೆ ಎಂದು ಈ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದವರೊಬ್ಬರು ಹೇಳಿದ್ದಾರೆ.
1993ರ ಮುಂಬೈ ಸರಣಿ ಸ್ಫೋಟ ಪ್ರಕರಣದಲ್ಲಿ ಭಾರತಕ್ಕೆ ಬೇಕಾಗಿರುವ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಪಾಕಿಸ್ತಾನದಲ್ಲಿ ತಲೆಮರೆಸಿಕೊಂಡಿದ್ದಾನೆ.
ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಮುಂಬ್ಕಾ ಗ್ರಾಮದಲ್ಲಿರುವ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಕುಟುಂಬ ಸದಸ್ಯರಿಗೆ ಸೇರಿದ ಆಸ್ತಿಯನ್ನು ಶುಕ್ರವಾರ ಹರಾಜು ಮೂಲಕ ಮಾರಾಟ ಮಾಡಲಾಯಿತು