ರಾಯ್ಪುರ: ನಟ ಪ್ರಭಾಸ್ ಅಭಿನಯದ 'ಆದಿಪುರುಷ್' ಸಿನಿಮಾವನ್ನು ನಿಷೇಧಿಸಬೇಕು ಎಂದು ಛತ್ತೀಸಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಮನವಿ ಮಾಡಿದ್ದಾರೆ.
ಬಿಜೆಪಿಯ ಹಿರಿಯ ನಾಯಕರೂ ಆಗಿರುವ ಅಮಿತ್ ಶಾ, ದುರ್ಗ್ ನಗರದಲ್ಲಿ ನಿಗದಿಯಾಗಿರುವ ಸಾರ್ವಜನಿಕ ಸಮಾವೇಶದಲ್ಲಿ ಪಾಲ್ಗೊಳ್ಳಲು ಇಂದು ಮಧ್ಯಾಹ್ನ ರಾಜಧಾನಿ ರಾಯ್ಪುರಕ್ಕೆ ಆಗಮಿಸಿದ್ದಾರೆ. ಈ ವೇಳೆ ಸಿನಿಮಾ ನಿಷೇಧ ಸಂಬಂಧ ಭೂಪೇಶ್ ಮನವಿ ಮಾಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಬಘೇಲ್, 'ಶ್ರೀರಾಮನ ಎಲ್ಲ ಆರಾಧಕರು ಮತ್ತು ರಾಜ್ಯದ ಎಲ್ಲ ಜನರು ಅಮಿತ್ ಶಾ ಅವರನ್ನು ಶ್ರೀರಾಮನ ತಾಯಿಯ ತವರಿಗೆ ಸ್ವಾಗತಿಸಿದ್ದಾರೆ. ರಾಮಾಯಣದ ಘನತೆ ಹಾಗೂ ದೇವರುಗಳ ಹೆಸರು ಕೆಡಿಸುತ್ತಿರುವ 'ಆದಿಪುರುಷ್' ಸಿನಿಮಾವನ್ನು ಬ್ಯಾನ್ ಮಾಡಬೇಕು ಎಂದು ಇದೇ ವೇಳೆ ವಿನಮ್ರವಾಗಿ ಮನವಿ ಮಾಡಿದ್ದೇನೆ' ಎಂದು ಬರೆದುಕೊಂಡಿದ್ದಾರೆ.
ಮಹಾಕಾವ್ಯ ರಾಮಾಯಣ ಆಧರಿಸಿ ತಯಾರಾಗಿರುವ 'ಆದಿಪುರುಷ್' ಸಿನಿಮಾ, ಪಾತ್ರಗಳ ಪ್ರಸ್ತುತಿ, ಸಂಭಾಷಣೆ ಹಾಗೂ ಭಾಷೆಯ ವಿಚಾರವಾಗಿ ವಿವಾದ ಸೃಷ್ಟಿಸಿದೆ.
ಈ ಸಿನಿಮಾ ಕಳೆದ ಶುಕ್ರವಾರ (ಜೂನ್ 16 ರಂದು) ವಿಶ್ವದಾದ್ಯಂತ ಬಿಡುಗಡೆಯಾಗಿದೆ.