ಲಖನೌ: ‘ನನ್ನೊಂದಿಗೆ ಛಾಯಾಚಿತ್ರ ತೆಗೆಸಿಕೊಂಡ ಕೆಲವು ಮಹಿಳಾ ಪೊಲೀಸರ ವಿರುದ್ಧ ಕ್ರಮಕೈಗೊಳ್ಳಲು ಉತ್ತರ ಪ್ರದೇಶ ಸರ್ಕಾರ ಯೋಚಿಸುತ್ತಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಆರೋಪಿಸಿದ್ದಾರೆ.
‘ಆ ಚಿತ್ರದಿಂದ ಯೋಗಿ ಆದಿತ್ಯನಾಥ್ ಅಸಮಾಧಾನಗೊಂಡಿದ್ದು ಚಿತ್ರದಲ್ಲಿನ ಮಹಿಳಾ ಪೊಲೀಸರ ವಿರುದ್ಧ ಕ್ರಮಕೈಗೊಳ್ಳಲು ಮುಂದಾಗಿದ್ದಾರೆ ಎಂಬ ಸುದ್ದಿ ಬರುತ್ತಿದೆ’ ಎಂದು ಮಹಿಳೆಯರೊಂದಿಗಿನ ಚಿತ್ರದೊಂದಿಗೆ ಗುರುವಾರ ಟ್ವೀಟ್ ಮಾಡಿದ್ದಾರೆ.
ಪೊಲೀಸ್ ಬಂಧನದಲ್ಲಿ ಮೃತಪಟ್ಟ ದಲಿತ ಕಾರ್ಮಿಕನ ಕುಟುಂಬಸ್ಥರನ್ನು ಭೇಟಿ ಮಾಡಲು ಪ್ರಿಯಾಂಕಾ ಅವರು ಆಗ್ರಾಕ್ಕೆ ತೆರಳುವ ಮಾರ್ಗದಲ್ಲಿ ಈ ಚಿತ್ರವನ್ನು ಕ್ಲಿಕ್ಕಿಸಲಾಗಿದೆ ಎಂದು ಹೇಳಲಾಗಿದೆ.
‘ನನ್ನೊಂದಿಗೆ ಚಿತ್ರಗಳನ್ನು ತೆಗೆದುಕೊಳ್ಳುವುದು ಅಪರಾಧವಾಗಿದ್ದರೆ, ನನಗೂ ಶಿಕ್ಷೆಯಾಗಬೇಕು. ಕಠಿಣ ಪರಿಶ್ರಮ ಮತ್ತು ನಿಷ್ಠಾವಂತರಾಗಿ ಸೇವೆ ಸಲ್ಲಿಸುತ್ತಿರುವ ಮಹಿಳಾ ಪೊಲೀಸರ ವೃತ್ತಿ ಬದುಕನ್ನು ಹಾಳು ಮಾಡುವುದು ಸರ್ಕಾರಕ್ಕೆ ಶೋಭೆ ತರುವುದಿಲ್ಲ’ ಎಂದು ಪ್ರಿಯಾಂಕಾ ಟ್ವೀಟ್ನಲ್ಲಿ ಹೇಳಿದ್ದಾರೆ.
ಮಹಿಳಾ ಪೊಲೀಸ್ ಸಿಬ್ಬಂದಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯೊಂದಿಗೆ ಚಿತ್ರ ತೆಗೆಸಿಕೊಂಡಿರುವುದರಿಂದ ಸೇವಾ ನಿಯಮಗಳ ಉಲ್ಲಂಘನೆಯಾಗಿದೆಯೇ ಎಂಬುದನ್ನು ತಿಳಿಯಲು ತನಿಖೆಗೆ ಆದೇಶಿಸಲಾಗಿದೆ ಎಂದು ಲಖನೌದ ಹಿರಿಯ ಪೊಲೀಸ್ ಅಧಿಕಾರಿ ಹೇಳಿದರು.
₹ 25 ಲಕ್ಷ ಕದ್ದ ಆರೋಪದ ಮೇಲೆ ಆಗ್ರಾದ ಜಗದೀಶ್ಪುರ ಪೊಲೀಸ್ ಠಾಣೆಯಲ್ಲಿ ಬಂಧಿತರಾಗಿದ್ದ ಅರುಣ್ ವಿಚಾರಣೆ ವೇಳೆ ಆರೋಗ್ಯ ಹದಗೆಟ್ಟು ಠಾಣೆಯಲ್ಲೇ ಮೃತಪಟ್ಟಿದ್ದರು.