ಪಟ್ನಾ: ರಾಷ್ಟ್ರೀಯ ಲೋಕಸಮತಾ ಪಾರ್ಟಿಯನ್ನು (ಆರ್ಎಲ್ಎಸ್ಪಿ) ಜೆಡಿಯುನಲ್ಲಿ ವಿಲೀನಗೊಳಿಸುವುದಾಗಿ ಆರ್ಎಲ್ಎಸ್ಪಿ ಮುಖ್ಯಸ್ಥರೂ ಆಗಿರುವ ಕೇಂದ್ರದ ಮಾಜಿ ಸಚಿವ ಉಪೇಂದ್ರ ಕುಶ್ವಾಹ ಭಾನುವಾರ ಹೇಳಿದರು.
ಪಕ್ಷದ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯು ಪಕ್ಷದ ಮುಂದಿನ ನಡೆ ಕುರಿತು ನಿರ್ಧಾರ ಕೈಗೊಳ್ಳುವ ಅಧಿಕಾರವನ್ನು ಕುಶ್ವಾಹ ಅವರಿಗೆ ನೀಡಿತು. ಸಮಿತಿ ಸಭೆ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ತಮ್ಮ ಈ ನಿರ್ಧಾರವನ್ನು ಪ್ರಕಟಿಸಿದರು.
‘ದೇಶದ ಪ್ರಸಕ್ತ ಸನ್ನಿವೇಶದಲ್ಲಿ ಸಮಾನ ಮನಸ್ಕ ಜನರು ಒಂದಾಗಬೇಕಿದೆ. ಹೀಗಾಗಿ ಹಿರಿಯ ಸಹೋದರರಂತಿರುವ ನಿತೀಶ್ಕುಮಾರ್ ಅವರ ನಾಯಕತ್ವದಲ್ಲಿ ನನ್ನ ರಾಜಕೀಯ ಪಯಣವನ್ನು ಮುಂದುವರಿಸಲು ನಿರ್ಧರಿಸಿದ್ದೇನೆ’ ಎಂದು ಹೇಳಿದರು.
‘ಜೆಡಿಯುನಲ್ಲಿ ಆರ್ಎಲ್ಎಸ್ಪಿ ವಿಲೀನಗೊಂಡ ಬಳಿಕ, ಪಕ್ಷದಲ್ಲಿ ನನ್ನ ಜವಾಬ್ದಾರಿ ಏನಿರಲಿದೆ ಎಂಬುದನ್ನು ನಿತೀಶ್ಕುಮಾರ್ ನಿರ್ಧರಿಸುವರು’ ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.