ಮುಂಬೈ: ಉತ್ತರ ಮುಂಬೈನಲ್ಲಿ ಚುನಾವಣಾ ಪ್ರಚಾರದ ವೇಳೆ ಘರ್ಷಣೆ ನಡೆದ ಕಾರಣ ಕಾಂಗ್ರೆಸ್ ಅಭ್ಯರ್ಥಿ ಊರ್ಮಿಳಾ ಮಾತೊಂಡ್ಕರ್ ಅವರಿಗೆ ಸೋಮವಾರ ಪೊಲೀಸ್ ಭದ್ರತೆ ನೀಡಲಾಗಿದೆ.
ತಮಗೆ ರಕ್ಷಣೆ ನೀಡುವಂತೆ ಊರ್ಮಿಳಾ ಮಾತೊಂಡ್ಕರ್ ಅವರು ಪೊಲೀಸರಿಗೆ ಮನವಿ ಮಾಡಿದ್ದರು.
‘ಚುನಾವಣೆ ಮುಗಿಯುವವರೆಗೆ ಊರ್ಮಿಳಾ ಅವರಿಗೆ ಭದ್ರತೆ ನೀಡಲಾಗುವುದು. ಘರ್ಷಣೆ ಬಗ್ಗೆ ಸೂಕ್ತ ಸಾಕ್ಷ್ಯಗಳಿಲ್ಲ. ಘಟನೆಯಲ್ಲಿ ಭಾಗಿಯಾಗಿದ್ದವರು ರೈಲು ಪ್ರಯಾಣಿಕರು ಎಂದಷ್ಟೇ ಹೇಳಬಹುದು’ ಎಂದು ಡಿಸಿಪಿ ಸಂಗ್ರಾಮ್ಸಿಂಗ್ ತಿಳಿಸಿದ್ದಾರೆ.
ತಮ್ಮ ಚುನಾವಣಾ ರ್ಯಾಲಿ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ಏಕಾಏಕಿ ನುಗ್ಗಿದ್ದನ್ನು ಖಂಡಿಸಿ ಪೊಲೀಸರಿಗೆ ದೂರು ನೀಡಿದ್ದ ಊರ್ಮಿಳಾ, ರಕ್ಷಣೆ ನೀಡುವಂತೆ ಕೋರಿದ್ದರು.
‘ನಮ್ಮತ್ತ ನುಗ್ಗಿದ ಕೆಲವರು ಕೀಳು ಅಭಿರುಚಿಯ ನೃತ್ಯ ಮಾಡಿ, ಅಸಭ್ಯ ಭಾಷೆ ಬಳಸಿದರು. ಭೀತಿ ಸೃಷ್ಟಿಸಲು ಬಿಜೆಪಿ ಯತ್ನಿಸುತ್ತಿದೆ’ ಎಂದು ಅವರು ದೂರಿನಲ್ಲಿ ಉಲ್ಲೇಖಿಸಿದ್ದರು.