ಬೆಂಗಳೂರು: ಸ್ನಾತಕೋತ್ತರ ಪದವಿ (ಎಂ.ಎಸ್) ಪಡೆಯಲು ಅಮೆರಿಕಕ್ಕೆ ತೆರಳಿದ್ದ ನನ್ನ ಮಗಳು ಚಿಕಾಗೋದ ರಸ್ತೆಗಳಲ್ಲಿ ಅನ್ನಕ್ಕಾಗಿ ಪರದಾಡುತ್ತಿದ್ದು ಆಕೆಯನ್ನು ಮರಳಿ ಭಾರತಕ್ಕೆ ಕರೆದುಕೊಂಡು ಬರುವಂತೆ ಆಕೆಯ ತಾಯಿ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರಿಗೆ ಪತ್ರ ಬರೆದಿದ್ದಾರೆ.
ಹೈದರಾಬಾದ್ನ ಸೈಯಿದಾ ಫಾತಿಮಾ ಅವರು ವಿದೇಶಾಂಗ ಸಚಿವರಿಗೆ ಪತ್ರ ಬರೆದಿದ್ದಾರೆ. ಇವರ ಪುತ್ರಿ 35 ವರ್ಷದ ಸೈಯಿದಾ ಜೈದಿ ವ್ಯಾಸಂಗಕ್ಕಾಗಿ ಅಮೆರಿಕಕ್ಕೆ ತೆರಳಿದ್ದರು.
‘ನನ್ನ ಮಗಳು ಡೆಟ್ರಾಯಿಟ್ನ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪಡೆಯಲು 2022 ಆಗಸ್ಟ್ನಲ್ಲಿ ಅಮೆರಿಕಕ್ಕೆ ಹೋಗಿದ್ದಳು. ಆಕೆಯ ಬಳಿಯಿದ್ದ ಹಣ, ಬೆಲೆಬಾಳುವ ವಸ್ತುಗಳನ್ನು ಕಳ್ಳತನ ಮಾಡಲಾಗಿದೆ. ಕಳೆದ ಎರಡು ತಿಂಗಳಿಂದ ನಮ್ಮ ಸಂಪರ್ಕಕ್ಕೆ ಸಿಕ್ಕಿಲ್ಲ. ಊಟಕ್ಕೆ ಹಣವಿಲ್ಲದೆ ಹಸಿವಿನಿಂದ ಬಳಲುತ್ತಿದ್ದು, ರಸ್ತೆಗಳಲ್ಲಿ ತಿರುಗಾಡುತ್ತಿದ್ದಾಳೆ ಎಂದು ಅಲ್ಲಿರುವ ಹೈದರಾಬಾದಿ ಯುವಕರು ಫೋಟೊ, ವಿಡಿಯೊ ಕಳುಹಿಸಿದ್ದಾರೆ. ಆಕೆ ಖಿನ್ನತೆಗೆ ಒಳಗಾಗಿದ್ದು, ತಾವು ಮಧ್ಯ ಪ್ರವೇಶಿಸಿ ಮರಳಿ ಭಾರತಕ್ಕೆ ಆಕೆಯನ್ನು ಕರೆ ತನ್ನಿ‘ ಎಂದು ಮನವಿ ಮಾಡಿದ್ದಾರೆ.
ಈ ಪತ್ರವನ್ನು ಬಿಆರ್ಎಸ್ ನಾಯಕ ಖಲೀಕುರ್ ರಹಮಾನ್ ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ. ಸಚಿವ ಎಸ್ ಜೈಶಂಕರ್ ಅವರಿಗೆ ಖಲೀಕುರ್ ರಹಮಾನ್ ಅವರು ಪತ್ರವನ್ನೂ ಟ್ಯಾಗ್ ಮಾಡಿದ್ದಾರೆ.
ಈ ಸುದ್ದಿ ಮಾಧ್ಯಮಗಳಲ್ಲಿ ಬೆಳಕಿಗೆ ಬಂದಿದೆ. ಇಲ್ಲಿಯವರೆಗೂ ಸಚಿವ ಜೈಶಂಕರ್ ಟ್ವಿಟರ್ನಲ್ಲಿ ಈ ಘಟನೆಗೆ ಸಂಬಂಧಿಸಿದಂತೆ ಯಾವುದೇ ಮಾಹಿತಿ ಹಂಚಿಕೊಂಡಿಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.