ಅಮ್ರೇಲಿ: ಅಭಿವೃದ್ಧಿ ದೂರದೃಷ್ಟಿಯಿಲ್ಲದ ಕಾಂಗ್ರೆಸ್ಗಾಗಿ ಮತ ಏಕೆ ವ್ಯರ್ಥ ಮಾಡಬೇಕು ಎಂದು ಹೇಳಿರುವ ಪ್ರಧಾನಿ ನರೇಂದ್ರ ಮೋದಿ, ಮುಂಬರುವ ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಆರಿಸುವಂತೆ ಮತದಾರರಿಗೆ ಕರೆ ನೀಡಿದ್ದಾರೆ.
ಭಾನುವಾರ ಸೌರಾಷ್ಟ್ರದ ಅಮ್ರೇಲಿಯಲ್ಲಿ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿದ ಮೋದಿ, ಅಭಿವೃದ್ಧಿಯ ಮಾರ್ಗಸೂಚಿಯನ್ನೇ ಹೊಂದಿಲ್ಲದ ಕಾಂಗ್ರೆಸ್ಗೆ ಮತ ಹಾಕಿ ವ್ಯರ್ಥ ಮಾಡಬಾರದು ಎಂದು ಹೇಳಿದರು.
ಗುಜರಾತ್ ಸರ್ಕಾರವು ಅನೇಕ ಜನಪರ ಕೆಲಸಗಳನ್ನು ಕೈಗೊಂಡಿದೆ. ಆದರೆ ಈ ಪ್ರದೇಶಕ್ಕಾಗಿ ಕಾಂಗ್ರೆಸ್ ಏನನ್ನೂ ಮಾಡಿಲ್ಲ ಎಂದು ಪ್ರಧಾನಿ ಮೋದಿ ದೂರಿದರು.
ಕಾಂಗ್ರೆಸ್ ನಾಯಕರು ನಿಮ್ಮನ್ನು ಅಭಿವೃದ್ಧಿಯ ಪಥದಲ್ಲಿ ಕೊಂಡೊಯ್ಯುತ್ತಾರೆ ಎಂದು ನಿರೀಕ್ಷಿಸಲು ಸಾಧ್ಯವಿಲ್ಲ. ಅಭಿವೃದ್ಧಿಯ ಮಾರ್ಗಸೂಚಿ ಏನೆಂಬುದನ್ನು ಕೇಳಿ. ಅವರ ಬಳಿ ಯೋಜನೆಯೇ ಇರುವುದಿಲ್ಲ ಎಂದು ಹೇಳಿದರು.
ಕಳೆದ ಚುನಾವಣೆಯಲ್ಲಿ ಹೆಚ್ಚಿನ ನಿರೀಕ್ಷೆಯನ್ನಿಟ್ಟುಕೊಂಡು ಅಮ್ರೇಲಿಯ ಜನರು ಕಾಂಗ್ರೆಸ್ ಅನ್ನು ಆರಿಸಿದರು. ಆದರೆ ಅವರೇನು ಮಾಡಿದರು? ಅವರು ಮಾಡಿದ ಒಂದು ಕೆಲಸವಾದರೂ ನಿಮಗೆ ನೆನಪಿದೆಯಾ? ಎಂದು ಕೇಳಿದರು.
ಹಾಗಾದರೆ ಕಾಂಗ್ರೆಸ್ಗಾಗಿ ಮತವನ್ನು ಏಕೆ ವ್ಯರ್ಥ ಮಾಡಬೇಕು? ಈ ಸಲ ಕಮಲ ಚಿಹ್ನೆಯನ್ನು ಆರಿಸಿ ಎಂದು ಮನವಿ ಮಾಡಿದರು.
2017ರ ಚುನಾವಣೆಯಲ್ಲಿ ಅಮ್ರೇಲಿ ಜಿಲ್ಲೆಯ ಎಲ್ಲ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿತ್ತು.