ತಿರುವನಂತಪುರ: ಕೇರಳದಲ್ಲಿ 2015ರಿಂದ ಇಲ್ಲಿಯವರೆಗೂ 416 ಕಾಡಾನೆಗಳು ಸಾವನ್ನಪ್ಪಿದ್ದು, ಈ ಪೈಕಿ 24 ಕಾಡಾನೆಗಳುಸ್ಫೋಟಕಅಥವಾ ವಿಷಾಹಾರ ಸೇವನೆ, ವಿದ್ಯುತ್ ಬೇಲಿ ಸ್ಪರ್ಷಿಸಿ ಹೀಗೆ ಅಸ್ವಾಭಾವಿಕ ಕಾರಣಗಳಿಂದ ಮೃತಪಟ್ಟಿವೆ.
ಬೆಳೆ ಹಾನಿ ತಡೆಯಲು ಕಾಡುಪ್ರಾಣಿಗಳಿಗೆ ಹಣ್ಣುಗಳಲ್ಲಿ ವಿಷ, ಸ್ಫೋಟಕಗಳನ್ನು ತುಂಬಿಸಿ ಇಡುವುದು, ವಿದ್ಯುತ್ ಬೇಲಿ ಅಳವಡಿಕೆ ಮುಂತಾದ ಕ್ರೂರ ಕ್ರಮಗಳನ್ನು ಇತ್ತೀಚೆಗೆ ಪಾಲಕ್ಕಾಡ್ ಜಿಲ್ಲೆಯಲ್ಲಿ ನಡೆದ ಗರ್ಭಿಣಿ ಕಾಡಾನೆಯ ಹತ್ಯೆ ಪ್ರಕರಣ ಬೆಳಕಿಗೆ ತಂದಿದೆ.
ತಜ್ಞರ ಸಮಿತಿ ರಚನೆಯಾಗಿಲ್ಲ: ಎರ್ನಾಕುಳಂ ಜಿಲ್ಲೆಯಲ್ಲಿ ಆನೆಯೊಂದರ ಸಾವಿನ ಪ್ರಕರಣದಲ್ಲಿ, ಅಪಘಾತಕ್ಕೊಳಗಾದ ಅಥವಾ ಸ್ಫೋಟಕಗಳ ಸೇವನೆಯಿಂದ ಘಾಸಿಗೊಳಗಾದ ವನ್ಯಜೀವಿಗಳ ರಕ್ಷಣೆ ಹಾಗೂ ಚಿಕಿತ್ಸೆಗೆ ಸಂಬಂಧಿಸಿದಂತೆ ತಜ್ಞರ ಸಮಿತಿಯನ್ನು ರಚಿಸಬೇಕು ಎಂದು 2014ರಲ್ಲೇ ಕೇರಳ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿತ್ತು. ಆದರೆ ಇದನ್ನು ಇಲ್ಲಿಯವರೆಗೂ ಸರ್ಕಾರ ಅನುಷ್ಠಾನಕ್ಕೆ ತಂದಿಲ್ಲ.