ಪಟ್ನಾ: ಮಹಿಳಾ ಮೀಸಲಾತಿ ಮಸೂದೆಯು ಬಾಬ್ ಕಟ್ ಮಾಡಿಸುವವರು ಹಾಗೂ ತುಟಿಗೆ ಬಣ್ಣ ಹಚ್ಚುವ ಮಹಿಳೆಯರಿಗೆ ಅನುಕೂಲವಾಗಲಿದೆಯೇ ಹೊರತು ಸಾಮಾನ್ಯ ಮಹಿಳೆಯರಿಗಲ್ಲ ಎಂದು ರಾಷ್ಟ್ರೀಯ ಜನತಾ ದಳದ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಸಿದ್ದಿಕಿ ಆರೋಪಿಸಿದ್ದಾರೆ.
ಮುಜಾಫರ್ಪುರದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಮಹಿಳಾ ಮೀಸಲಾತಿ ಮಸೂದೆಯನ್ನು ಹಿಂದುಳಿದ ವರ್ಗಗಳಿಗೆ ನೀಡಬೇಕು. ಬಾಬ್ ಕಟ್ ಹಾಗೂ ಲಿಪ್ಸ್ಟಿಕ್ ಹಚ್ಚುವವರು ಲೋಕಸಭೆಗೆ ಬಂದರೆ, ಗ್ರಾಮೀಣ ಭಾಗದಲ್ಲಿ ವಾಸಿಸುವ ಜನರು ಅಭಿವೃದ್ದಿ ಕಾಣಲು ಸಾಧ್ಯವಿಲ್ಲ ಎಂದಿದ್ದಾರೆ.
ಲೋಕಸಭೆ ಹಾಗೂ ರಾಜ್ಯಸಭೆಗಳಲ್ಲಿ ಮಹಿಳೆಯರಿಗೆ ಶೇ 33ರಷ್ಟು ಸ್ಥಾನ ಒದಗಿಸುವ ಮಹಿಳಾ ಮೀಸಲಾತಿ ಮಸೂದೆ ಉಭಯ ಸದನಗಳಲ್ಲಿ ಅಂಗೀಕಾರವಾಗಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮ ಅವರು ಗುರುವಾರ ಈ ಮಸೂದೆಗೆ ಒಪ್ಪಿಗೆ ಸೂಚಿಸಿದ್ದಾರೆ.
ಸಿದ್ದಿಕಿ ಹೇಳಿಕೆಗೆ ಪ್ರತಿಕ್ರಿಯಿಸಿರುವ ಬಿಜೆಪಿ ಹಿಂದುಳಿದ ವರ್ಗಗಳ ಘಟಕದ ಪ್ರಧಾನ ಕಾರ್ಯದರ್ಶಿ ಡಾ. ನಿಖಿಲ್ ಆನಂದ್, ಸಿದ್ದಿಕಿ ಮಹಿಳಾ ವಿರೋಧಿ ಮನಸ್ಥಿತಿಯನ್ನು ಹೊಂದಿದ್ದಾರೆ. ಭಾರತದಲ್ಲಿ ಹಿಂದುಳಿದ ವರ್ಗಗಳ ಮೀಸಲಾತಿಯ ಬಗ್ಗೆ ಚಿಂತಿಸುವ ಅವರು, ಸಾರ್ವಜನಿಕವಾಗಿಯೇ ಅವರ ಮಗನಿಗೆ ಭಾರತಕ್ಕೆ ಮರಳಿ ಬರಬೇಡ ವಿದೇಶದಲ್ಲಿಯೇ ನೆಲಸುವಂತೆ ಹೇಳಿದ್ದರು ಎಂದು ಆರೋಪಿಸಿದ್ದಾರೆ.