ಲಖನೌ (ಪಿಟಿಐ): ನಾಟಕೀಯ ಬೆಳವಣಿಗೆಯಲ್ಲಿ ಜಾಗೃತ ದಳದ ಅಧಿಕಾರಿಗಳು ಅಕ್ರಮ ಆಸ್ತಿ ಸಂಪಾದನೆ ಆರೋಪದಲ್ಲಿ ಅಮಾನತುಗೊಂಡಿರುವ ಐಪಿಎಸ್ ಅಧಿಕಾರಿ ಅಮಿತಾಭ್ ಠಾಕೂರ್ ಅವರ ಗೋಮತಿ ನಗರದಲ್ಲಿನ ನಿವಾಸದಲ್ಲಿ ಮಂಗಳವಾರ ಶೋಧ ನಡೆಸಿದರು.
‘ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಅವರ ವಿರುದ್ಧ ಎಫ್ಐಆರ್ ದಾಖಲಿಸಿದ್ದ ಕಾರಣಕ್ಕೆ ನನಗೆ ಕಿರುಕುಳ ನೀಡಲಾಗುತ್ತಿದೆ. ನನ್ನ ನಿವಾಸದ ಮೇಲೆ ಜಾಗೃತ ದಳವು ದಾಳಿ ಮಾಡಿದೆ. ಜಾಗೃತ ದಳದ ನಿರ್ದೇಶಕ ಭಾನು ಪ್ರತಾಪ್ ಸಿಂಗ್ ಅವರು ಸಮಾಜವಾದಿ ಪಕ್ಷದ ಅನುಯಾಯಿಯಂತೆ ಕೆಲಸ ಮಾಡುತ್ತಿದ್ದಾರೆ’ ಎಂದು ತಮ್ಮ ನಿವಾಸದೆದುರು ಸೇರಿದ್ದ ಸುದ್ದಿಗಾರರ ಮುಂದೆ ಠಾಕೂರ್ ಆರೋಪಿಸಿದರು.
ತಮ್ಮ ಗುರುತಿನ ಚೀಟಿಗಳನ್ನು ತೋರಿಸುವಂತೆ ಕೇಳಿದಾಗ ಅಧಿಕಾರಿಗಳು ನಿರಾಕರಿಸಿದರು. ಅವರು ಪಕ್ಷದ ಕಾರ್ಯಕರ್ತರಂತೆ ವರ್ತಿಸುತ್ತಿದ್ದರು ಎಂದು ಠಾಕೂರ್ ದೂರಿದರು. ತನ್ನ ವಿರುದ್ಧದ ತನಿಖಾ ವರದಿಯಲ್ಲಿನ ಸತ್ಯವನ್ನು ತಿರುಚಲಾಗಿದೆ ಎಂದು ಆರೋಪಿಸಿ ಠಾಕೂರ್ ಕಳೆದ ವಾರ ಭಾನು ಪ್ರತಾಪ್ ಸಿಂಗ್ ಹಾಗೂ ಮತ್ತಿತರರ ವಿರುದ್ಧ ದೂರು ಸಲ್ಲಿಸಿದ್ದರು.
ಆದಾಯಕ್ಕೂ ಮೀರಿ ಅಕ್ರಮ ಆಸ್ತಿ ಹೊಂದಿರುವ ಆರೋಪದಲ್ಲಿ ಜಾಗೃತದಳವು ಕಳೆದ ತಿಂಗಳು ಠಾಕೂರ್ ಅವರ ವಿರುದ್ಧ ಎಫ್ಐಆರ್ ದಾಖಲಿಸಿತ್ತು. ಮುಲಾಯಂ ಸಿಂಗ್ ದೂರವಾಣಿ ಮೂಲಕ ತಮಗೆ ಬೆದರಿಕೆ ಒಡ್ಡಿದ್ದಾರೆ ಎಂದು ಠಾಕೂರ್ ಪೊಲೀಸರಿಗೆ ದೂರು ನೀಡಿದ್ದರು. ಬಳಿಕ ಜುಲೈ ತಿಂಗಳಿನಲ್ಲಿ ಅವರನ್ನು ಅಮಾನತು ಮಾಡಲಾಗಿತ್ತು.