ನವದೆಹಲಿ (ಪಿಟಿಐ): ಎಸ್-ಬ್ಯಾಂಡ್ ತರಂಗಾಂತರ ನೀಡಿಕೆ ಒಪ್ಪಂದ ತೀವ್ರ ವಿವಾದ ಎಬ್ಬಿಸಿರುವ ಹಿನ್ನೆಲೆಯಲ್ಲಿ ಶನಿವಾರ ಇಲ್ಲಿ ಸಭೆ ಸೇರಲಿರುವ ಬಾಹ್ಯಾಕಾಶ ಆಯೋಗ, ಇಸ್ರೊದ ವಾಣಿಜ್ಯ ಘಟಕವಾದ ‘ಅಂತರಿಕ್ಷ್’ದ ರಚನಾತ್ಮಕ ಬದಲಾವಣೆ ಕುರಿತು ಚರ್ಚಿಸುವ ನಿರೀಕ್ಷೆ ಇದೆ.ಬಾಹ್ಯಾಕಾಶ ಆಯೋಗದ ಮುಖ್ಯಸ್ಥರಾದ ಕೆ.ರಾಧಾಕೃಷ್ಣನ್ ಅವರ ನೇತೃತ್ವದಲ್ಲಿ ನಡೆಯಲಿರುವ ಸಭೆಯಲ್ಲಿ ‘ಅಂತರಿಕ್ಷ್’ ಹಾಗೂ ದೇವಾಸ್ ಕಂಪೆನಿ ನಡುವೆ 2005ರಲ್ಲಿ ಏರ್ಪಟ್ಟ ಒಪ್ಪಂದದ ಬಗ್ಗೆಯೂ ಚರ್ಚೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
ಜಿಸ್ಯಾಟ್ 6 ಮತ್ತು ಜಿ ಸ್ಯಾಟ್ 6 ಎ ಉಪಗ್ರಹಗಳ ಶೇ 90ರಷ್ಟು ಟ್ರಾನ್ಸ್ಪಾಂಡರ್ಗಳನ್ನು ದೇವಾಸ್ ಬಳಕೆಗೆ ಮೀಸಲಿಡುವ ಈ ಒಪ್ಪಂದವನ್ನು ಪುನರ್ಪರಿಶೀಲಿಸಲು ಇಸ್ರೊ 2009ರ ಡಿಸೆಂಬರ್ನಲ್ಲಿ ಆದೇಶಿಸಿತ್ತು. ಇದಾದ ನಂತರ ಬಾಹ್ಯಾಕಾಶ ಆಯೋಗ 2010ರ ಜುಲೈ 2ರಂದು ಒಪ್ಪಂದ ರದ್ದತಿಗೆ ಹಾಗೂ ಅಂತರಿಕ್ಷ್ದ ರಚನಾ ಸ್ವರೂಪ ಬದಲಿಸಲು ಶಿಫಾರಸು ಮಾಡಿತ್ತು.
ಈ ಒಪ್ಪಂದದಿಂದಾಗಿ ರಾಷ್ಟ್ರದ ಬೊಕ್ಕಸಕ್ಕೆ 2 ಲಕ್ಷ ಕೋಟಿ ರೂಪಾಯಿ ನಷ್ಟವಾಗಿದೆ ಎಂಬ ಮಾಧ್ಯಮ ವರದಿ ಹಿನ್ನೆಲೆಯಲ್ಲಿ ಇದೀಗ ಈ ಕುರಿತು ತೀವ್ರ ವಿವಾದ ಎದ್ದಿದೆ. ಮತ್ತೊಂದೆಡೆ ಸಮಿತಿ ರಚನೆಯನ್ನು ಸ್ವಾಗತಿಸಿರುವ ದೇವಾಸ್ ಕಂಪೆನಿಯ ಅಧ್ಯಕ್ಷ ರಾಮಚಂದ್ರನ್ ವಿಶ್ವನಾಥನ್ ‘ಯಾರೇ ತನಿಖೆ ನಡೆಸಿದರೂ ಈ ಸಂಬಂಧ ನಮ್ಮಲ್ಲಿರುವ ಎಲ್ಲ ಮಾಹಿತಿಯನ್ನು ಹಂಚಿಕೊಳ್ಳಲು ಸಾಧ್ಯ’ ಎಂದು ಸ್ಪಷ್ಟಪಡಿಸಿದ್ದಾರೆ.