ನವದೆಹಲಿ (ಪಿಟಿಐ): ಎರಡು ಅಧಿಕಾರ ಕೇಂದ್ರಗಳ ಕುರಿತಾದ ಚರ್ಚೆಯೇ ವ್ಯರ್ಥ ಎಂದಿರುವ ಪ್ರಧಾನಿ ಮನಮೋಹನ್ ಸಿಂಗ್, ತಾವು ಮೂರನೇ ಬಾರಿಗೆ ಪ್ರಧಾನಿಯಾಗುವ ಸಾಧ್ಯತೆಯನ್ನು ತಳ್ಳಿಹಾಕಲಿಲ್ಲ.
ರಾಷ್ಟ್ರಪತಿ ಭವನದಲ್ಲಿ ಶುಕ್ರವಾರ ಪದ್ಮ ಪ್ರಶಸ್ತಿ ಪ್ರದಾನ ಸಮಾರಂಭದ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಇದನ್ನು ಮಾಧ್ಯಮಗಳು ಸೃಷ್ಟಿಸಿವೆ. ಇದು ಅನುಪಯುಕ್ತ ಚರ್ಚೆಯಾಗಿದೆ ಎಂದರು.
ಹಿರಿಯ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಇತ್ತೀಚೆಗೆ, `ಪ್ರಧಾನಿ ಸಿಂಗ್ ಹಾಗೂ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಅವರನ್ನು ಒಳಗೊಂಡ ಎರಡು ಅಧಿಕಾರ ಕೇಂದ್ರಗಳ ಮಾದರಿ ಸಮರ್ಪಕವಾಗಿ ಕೆಲಸ ಮಾಡಿಲ್ಲ. ಭವಿಷ್ಯದಲ್ಲಿ ಅಂತಹ ಮಾದರಿ ಅನುಸರಿಸಬಾರದು' ಎಂದು ಹೇಳಿದ್ದರು.
ದಿಗ್ವಿಜಯ್ ಅವರ ಹೇಳಿಕೆಯನ್ನು ಅಧಿಕೃತವಾಗಿ ತಳ್ಳಿಹಾಕಿದ್ದ ಕಾಂಗ್ರೆಸ್, ಇದು `ಆದರ್ಶ ಮಾದರಿ'ಯಾಗಿದ್ದು ಭವಿಷ್ಯದಲ್ಲೂ ಅಳವಡಿಸಿಕೊಳ್ಳಬಹುದಾಗಿದೆ ಎಂದು ಹೇಳಿತ್ತು.
ಮೂರನೇ ಬಾರಿ ಪ್ರಧಾನಿ ಹುದ್ದೆ ಸ್ವೀಕರಿಸುವಿರಾ ಎಂಬ ಪ್ರಶ್ನೆಗೆ, ಇದು ಊಹಾಪೋಹದ ಪ್ರಶ್ನೆಯಾಗಿದೆ. ಈ ಅವಧಿಯನ್ನೇ ನಾವು ಪೂರೈಸಿಲ್ಲ ಎಂದರು.
`ನೀವು ಮತ್ತೊಮ್ಮೆ ಪ್ರಧಾನಿಯಾಗುವ ಸಾಧ್ಯತೆ ಇಲ್ಲವೇ' ಎಂಬ ಪ್ರಶ್ನೆಗೆ, `ನಾನು ಅದನ್ನು ಸಂಪೂರ್ಣವಾಗಿ ತಳ್ಳಿಹಾಕುವುದಿಲ್ಲ. ಹಾಗೆಂದು ಒಪ್ಪಿಕೊಳ್ಳುವುದೂ ಇಲ್ಲ' ಎಂದರು ಸಿಂಗ್. `ರಾಹುಲ್ ಅವರು ಪ್ರಧಾನಿ ಸ್ಥಾನದಲ್ಲಿ ಕುಳಿತರೆ ಸ್ವಾಗತಿಸುವಿರಾ' ಎಂಬ ಪ್ರಶ್ನೆಗೆ, `ಹೌದು ಯಾವುದೇ ದಿನ' ಎಂದು ಸಿಂಗ್ ಉತ್ತರಿಸಿದರು.