ಹೈದರಾಬಾದ್(ಪಿಟಿಐ): ತೆಲಂಗಾಣ ಕರಡು ಮಸೂದೆ ಮೇಲಿನ ಚರ್ಚೆ ಯನ್ನು ಆಂಧ್ರಪ್ರದೇಶ ವಿಧಾನಸಭೆ ಯಲ್ಲಿ ಬುಧವಾರವೂ ಕೈಗೆತ್ತಿಕೊಳ್ಳಲಾಗದೆ ಗದ್ದಲ ಮುಂದುವರಿಯಿತು.
ಕರಾವಳಿ ಆಂಧ್ರ ಹಾಗೂ ರಾಯಲ ಸೀಮಾ ಭಾಗದ ಶಾಸಕರು ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆಗೆ ಭಾರಿ ವಿರೋಧ ವ್ಯಕ್ತಪಡಿಸಿದರು. ಇದರಿಂದಾಗಿ ಕಲಾಪವನ್ನು ಎರಡು ಬಾರಿ ಮುಂದೂಡಬೇಕಾಯಿತು.
ಸೀಮಾಂಧ್ರ ಭಾಗದ ಟಿಡಿಪಿ ಹಾಗೂ ವೈಎಸ್ಆರ್ ಕಾಂಗ್ರೆಸ್ ಶಾಸಕರು ಸ್ಪೀಕರ್ ಆಸನದ ಮುಂಭಾಗ ಪ್ರತಿಭಟನೆ ನಡೆಸಿ ‘ಆಂಧ್ರಪ್ರದೇಶ ಪುನರ್ ರಚನೆ ಮಸೂದೆ–2013’ ವಿರುದ್ಧ ಘೋಷಣೆ ಗಳನ್ನು ಕೂಗಿದರು. ಪ್ರಸ್ತಾವಿತ ಆಂಧ್ರ ವಿಭಜನೆ ವಿರೋಧಿ ನಿರ್ಣಯವನ್ನು ಸದನ ಮೊದಲಿಗೆ ಅಂಗೀಕಾರ ಮಾಡಬೇಕು ಎಂದು ಒತ್ತಾಯಿಸಿದರು.
ಟಿಡಿಪಿ, ವೈಎಸ್ಆರ್ ಕಾಂಗ್ರೆಸ್ ಮತ್ತು ಸಿಪಿಐ ಶಾಸಕರ ಬೇಡಿಕೆಯಂತೆ ನಿಲುವಳಿ ಸೂಚನೆಗೆ ಸ್ಪೀಕರ್ ನಾಂದೇಲಾ ಮನೋಹರ್ ನಿರಾಕರಿಸಿದರು. 75 ನಿಮಿಷದ ಬಳಿಕ ಕಲಾಪ ಆರಂಭವಾದಾಗಲೂ ಗದ್ದಲದ ವಾತಾವರಣ ಉಂಟಾಯಿತು. ಇದರಿಂದಾಗಿ ಕಲಾಪವನ್ನು ಮತ್ತೊಂದು ಗಂಟೆ ಮುಂದೂಡಲಾಯಿತು.