ಬಾಲಸೋರ್ (ಒಡಿಶಾ): ಸ್ವದೇಶಿ ನಿರ್ಮಿತ ಭೂಮಿಯಿಂದ ಆಕಾಶಕ್ಕೆ ಚಿಮ್ಮುವ ಆಕಾಶ್ ವಾಯು ಕ್ಷಿಪಣಿಯ ಪ್ರಯೋಗಾರ್ಥ ಪರೀಕ್ಷೆ ಇಲ್ಲಿಗೆ ಸಮೀಪದ ಚಂಡಿಪುರದ ಸಮಗ್ರ ಕ್ಷಿಪಣಿ ಪರೀಕ್ಷಾ ಕೇಂದ್ರದಲ್ಲಿ ಗುರುವಾರ ಯಶಸ್ವಿಯಾಗಿ ನಡೆಯಿತು.
2008ರಲ್ಲಿಯೇ ಸೇನಾಪಡೆಯಲ್ಲಿ ಆಕಾಶ್ ಕ್ಷಿಪಣಿ ಅಳವಡಿಸಲಾಗಿದ್ದು, ಅದರ ತಂತ್ರಜ್ಞಾನ ಹಾಗೂ ಸಾಮರ್ಥ್ಯವನ್ನು ಮತ್ತೊಮ್ಮೆ ಒರೆಗೆ ಹಚ್ಚುವ ನಿಟ್ಟಿನಲ್ಲಿ ಈ ಪರೀಕ್ಷೆ ನಡೆಸಲಾಯಿತು.
25 ಕಿ.ಮೀ ದೂರ ಕ್ರಮಿಸಬಲ್ಲ 60 ಕೆಜಿ ಸಿಡಿತಲೆಗಳನ್ನು ಹೊತ್ತೊಯ್ಯುವ ಸಾಮರ್ಥ್ಯದ ಈ ಕ್ಷಿಪಣಿಯನ್ನು ಬೆಳಿಗ್ಗೆ 11 ಗಂಟೆಗೆ ಚಂಡಿಪುರದಿಂದ ಹಾರಿಸಲಾಯಿತು.
ಸಮುದ್ರದ ಮೇಲೆ ಚಾಲಕರಹಿತ ಯುದ್ಧವಿಮಾನಕ್ಕೆ ಕಟ್ಟಲಾದ ಗಾಳಿಯಲ್ಲಿ ತೇಲುವ ವಸ್ತುವೊಂದನ್ನು ಕ್ಷಿಪಣಿ ಧ್ವಂಸಗೊಳಿಸಬೇಕಿತ್ತು. `ಆಕಾಶ್~ ತನ್ನ ಗುರಿಯನ್ನು ಯಶಸ್ವಿಯಾಗಿ ಮುಟ್ಟಿತು ಎಂದು ರಕ್ಷಣಾ ಸಂಶೋಧನೆ ಹಾಗೂ ಅಭಿವೃದ್ಧಿ ಸಂಸ್ಥೆಯ (ಡಿಆರ್ಡಿಒ) ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಗಳೂರಿನ `ಡಿಆರ್ಡಿಒ~ ಪ್ರಯೋಗಾಲಯದಲ್ಲಿ ಅಭಿವೃದ್ಧಿಪಡಿಸಲಾದ `ರಾಜೇಂದ್ರ~ ರೇಡಾರ್ ನೆರವಿನಿಂದ ಒಂದೇ ಬಾರಿ ಹಲವು ದಿಕ್ಕಿನಲ್ಲಿ ದಾಳಿ ನಡೆಸುವ ಸಾಮರ್ಥ್ಯವನ್ನು ಆಕಾಶ್ ಹೊಂದಿದೆ. ರಕ್ಷಣಾ ತಜ್ಞರು ಈ ಕ್ಷಿಪಣಿಯನ್ನು ಅಮೆರಿಕದ ಪೆಟ್ರಿಯಾಟ್ ಭೂ-ವಾಯು ಕ್ಷಿಪಣಿಗೆ ಹೋಲಿಸಿದ್ದಾರೆ. ಚಾಲಕ ರಹಿತ ಯುದ್ಧವಿಮಾನಗಳನ್ನು ಧ್ವಂಸಗೊಳಿಸುವ ಸಾಮರ್ಥ್ಯ ಈ ಕ್ಷಿಪಣಿಗಿದೆ.