ನವದೆಹಲಿ (ಐಎಎನ್ಎಸ್): ಯುಪಿಎ ಸರ್ಕಾರವು ಚಿಲ್ಲರೆ ಮಾರಾಟ ವಲಯದಲ್ಲಿ ಶೇ.51 ರಷ್ಟು ವಿದೇಶಿ ನೇರ ಬಂಡವಾಳ ಹೂಡಿಕೆಗೆ (ಎಫ್ಡಿಐ) ಅವಕಾಶ ನೀಡುವ ಮಹತ್ವದ ತೀರ್ಮಾನ ಕೈಗೊಂಡ ಕ್ರಮವನ್ನು ವಿರೋಧಿಸಿ ಸೋಮವಾರ ಸಂಸತ್ನ ಉಭಯ ಸದನಗಳಲ್ಲಿ ಪ್ರತಿಪಕ್ಷಗಳು ಪ್ರತಿಭಟನೆ ನಡೆಸಿದ ಪರಿಣಾಮ ಕಲಾಪವನ್ನು ದಿನದ ಮಟ್ಟಿಗೆ ಮುಂದೂಡಲಾಯಿತು.
ಸಂಸತ್ತಿನ ಹೊರಗೆ ಮಾಧ್ಯಮದವರೊಂದಿಗೆ ಮಾತನಾಡಿದ ಎನ್ಡಿಎ ಸಂಚಾಲಕ ಶರದ್ ಯಾದವ್ ಅವರು `ಸರ್ಕಾರ ಕೈಗೊಂಡಿರುವ ಎಫ್ಡಿಐ ತೀರ್ಮಾನವು ಕೇವಲ ಸಂಸತ್ತಿಗೆ ಸಿಮಿತವಲ್ಲ, ಅದು ಇಡೀ ದೇಶಕ್ಕೆ ಸಂಬಂಧಿಸಿದ್ದಾಗಿದೆ. ಆದ್ದರಿಂದ ಇದನ್ನು ಹಿಂತೆಗೆದುಕೊಳ್ಳಬೇಕು~ ಎಂದು ಆಗ್ರಹಿಸಿದರು.
ಕಲಾಪ ಮುಂದೂಡಿದ ನಂತರ ಸುದ್ಧಿಗಾರರೊಂದಿಗೆ ಮಾತನಾಡಿದ ಸಂಸದೀಯ ವ್ಯವಹಾರಗಳ ರಾಜ್ಯ ಖಾತೆ ಸಚಿವ ರಾಜೀವ್ ಶುಕ್ಲಾ ಅವರು `ವಿರೋಧ ಪಕ್ಷಗಳು ಎಫ್ಡಿಐ ತೀರ್ಮಾನ ಮುಂದಿಟ್ಟುಕೊಂಡು ಕಲಾಪಕ್ಕೆ ಅಡ್ಡಿಪಡಿಸುವ ಬದಲು ಸಂಸತ್ತಿನಲ್ಲಿ ಚರ್ಚಿಸಲಿ~ ಎಂದು ಹೇಳಿದರು.
ಬಿಜೆಪಿಯ ಈ ವಿರೋಧಕ್ಕೆ ಎಡಪಕ್ಷಗಳು ಕೂಡ ತಮ್ಮ ಬೆಂಬಲ ನೀಡಿದ್ದು, ಲೋಕಸಭಾಧ್ಯಕ್ಷೆ ಮೀರಾ ಕುಮಾರ್ ಅವರು ಈ ಬಿಕ್ಕಟ್ಟನ್ನು ತಣ್ಣಗಾಗಿಸುವ ನಿಟ್ಟಿನಲ್ಲಿ ವಿರೋಧ ಪಕ್ಷಗಳ ನಾಯಕರ ಸಭೆ ಕರೆಯುವ ಸಾಧ್ಯತೆಯಿದೆ.