ಹೈದರಾಬಾದ್ (ಪಿಟಿಐ): ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು ಪಕ್ಷದ ಪ್ರಧಾನಿ ಅಭ್ಯರ್ಥಿಯಾಗಿ ಘೋಷಿಸಿರುವುದಕ್ಕೆ ದೇಶದಾದ್ಯಂತ ಉತ್ತಮ ಪ್ರತಿಕ್ರಿಯೆಗಳು ಬರುತ್ತಿವೆ. ಅಭಿವೃದ್ಧಿ ವಿಷಯವನ್ನೇ ಪ್ರಧಾನವಾಗಿ ಇಟ್ಟುಕೊಂಡು ಮುಂಬರುವ ಲೋಕಸಭಾ ಚುನಾವಣೆಯನ್ನು ಪಕ್ಷ ಎದುರಿಸಲಿದೆ ಎಂದು ಬಿಜೆಪಿ ಮುಖಂಡ ವೆಂಕಯ್ಯ ನಾಯ್ಡು ತಿಳಿಸಿದರು.
ಮೋದಿ ಅವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಘೋಷಿಸಿರುವುದರಿಂದ ಕಾಂಗ್ರೆಸ್ಗೆ ನಡುಕ ಹುಟ್ಟಿದೆ. ಆದಕಾರಣ ಮುಖಂಡರು ಬೇಜವಾಬ್ದಾರಿ ಮತ್ತು ಮೂಖರ್ತನದ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಸುದ್ದಿಗಾರರಿಗೆ ತಿಳಿಸಿದರು. ನರೇಂದ್ರ ಮೋದಿ ಹಾಗೂ ಅವರ ಅಭಿವೃದ್ಧಿ ಮಾದರಿಯನ್ನು ಎದುರಿಸಲಾಗದ ಕಾಂಗ್ರೆಸ್ ಮುಖಂಡರು, ಮೋದಿ ಅವರು ಜಯಗಳಿಸಿದ ದಿನ ಪ್ರಜಾಪ್ರಭುತ್ವ ಅಂತ್ಯಗೊಳ್ಳಲಿದೆ, ಪ್ರಜಾಪ್ರಭುತ್ವದ ಕೊಲೆಯಾಗಿದೆ ಎಂಬ ಹತಾಶ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಟೀಕಿಸಿದರು.
ಮುಖಂಡ ಎಲ್.ಕೆ.ಅಡ್ವಾಣಿ ಅವರ ನಿಲುವಿನ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ನಾಯ್ಡು ಅವರು, ಅಡ್ವಾಣಿ ಅವರು ಪಕ್ಷದ ಹಿರಿಯ ನಾಯಕ. ಎಲ್ಲರನ್ನು ಪಕ್ಷಕ್ಕೆ ಕರೆತಂದವರು. ಮೋದಿ ಅವರ ಆಯ್ಕೆ ವಿಚಾರಕ್ಕೆ ಅವರಿಗೆ ವಿರೋಧವಿಲ್ಲ. ಆದರೆ ಚುನಾವಣೆ ನಂತರ ಘೋಷಿಸಬೇಕಿತ್ತು ಎಂಬ ಅಭಿಪ್ರಾಯವಿತ್ತು ಎಂದಷ್ಟೇ ಹೇಳಿದರು.
ಹಿಂದುತ್ವ ನಮಗೆ ಚುನಾವಣಾ ವಿಷಯವಲ್ಲ. ಅಭಿವೃದ್ಧಿಯೇ ಚುನಾವಣೆಯ ಪ್ರಮುಖ ಕಾರ್ಯಸೂಚಿ ಎಂದು ಈಗಾಗಲೇ ಸ್ಪಷ್ಟಪಡಿಸಿದ್ದೇವೆ. ದೇಶದ ಜನತೆಯ ಹಿತದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಎಲ್ಲರೂ ಸ್ವಾಗತಿಸಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಐದು ರಾಜ್ಯಗಳ ಪೈಕಿ ನಾಲ್ಕು ರಾಜ್ಯಗಳಲ್ಲಿ ಕಾಂಗ್ರೆಸ್ ತನ್ನ ಅಸ್ತಿತ್ವ ಕಳೆದುಕೊಳ್ಳಲಿರುವ ಭೀತಿ ಎದುರಿಸುತ್ತಿದೆ. ಸಮೀಕ್ಷೆಯಿಂದಲೂ ಇದು ದೃಢಪಟ್ಟಿದೆ. ಒಮ್ಮೆ ನಾಲ್ಕು ರಾಜ್ಯಗಳಲ್ಲಿ ಕಾಂಗ್ರೆಸ್ ತನ್ನ ಅಸ್ತಿತ್ವಕಳೆದುಕೊಂಡಲ್ಲಿ ಗೆಲುವು ಸಾಧಿಸುವುದು ಕಷ್ಟವಿದೆ ಎಂದು ವಿಶ್ಲೇಷಿಸಿದರು.