ಅಶಿಸ್ತಿನ ವರ್ತನೆ ಕುರಿತು ತನಿಖೆಗೆ ಸ್ಪೀಕರ್ ಆದೇಶಶ್ರೀನಗರ (ಪಿಟಿಐ): ಉದ್ಯೋಗ ಯೋಜನೆಯನ್ನು ಜಾರಿಗೆ ತರಬೇಕೆಂದು ಒತ್ತಾಯಿಸಿ ಮೂವರು ಯುವಕರು ಏಕಾಏಕಿ ಜಮ್ಮು ಮತ್ತು ಕಾಶ್ಮೀರದ ವಿಧಾನಸಭೆಯ ಒಳಗೆ ಪ್ರವೇಶಿಸಿ ಅಶಿಸ್ತಿನಿಂದ ವರ್ತಿಸಿರುವ ಘಟನೆ ಸೋಮವಾರ ನಡೆದಿದೆ.
ಮನೀಶ್ ಕಜುರಿಯಾ, ಸನ್ನಿ ಮಲ್ಹೋತ್ರಾ ಹಾಗೂ ಅಂಬೇಡ್ಕರ್ ಗುಪ್ತ ಎನ್ನುವ ಮೂವರು ಯುವಕರು ಈ ಕೃತ್ಯ ಎಸಗಿದ್ದು, ಸ್ಪೀಕರ್ ಮಹಮದ್ ಅಕ್ಬರ್ ಅವರ ಅದೇಶದಂತೆ ಅವರನ್ನು ಪೊಲೀಸರ ವಶಕ್ಕೆ ತೆಗೆದುಕೊಳ್ಳಲಾಗಿದೆ.
ಸಾರ್ವಜನಿಕರ ಗ್ಯಾಲರಿಯಿಂದ ಕಲಾಪ ವೀಕ್ಷಿಸಲು ಯುವಕರು ಉಚ್ಚಾಟಿತ ಬಿಜೆಪಿ ಸದಸ್ಯ ಜಗದೀಶ ರಾಜ್ ಸಪೊಲಿಯ ಸಹಾಯದಿಂದ ಪಾಸನ್ನು ಪಡೆದಿದ್ದರು ಎಂದು ತಿಳಿದುಬಂದಿದೆ.
ಯುವಕರು ಏಕಾಏಕಿ ಹೇಗೆ ಒಳಗೆ ಪ್ರವೇಶಿಸಿದರು ಎಂಬ ಬಗ್ಗೆ ತನಿಖೆ ನಡೆಸಲು ಸ್ಪೀಕರ್ ಆದೇಶಿಸಿದ್ದಾರೆ. ಈ ಘಟನೆಯಿಂದಾಗಿ ಕಲಾಪ ಕೆಲ ಕಾಲ ಸ್ಥಗಿತಗೊಂಡಿತ್ತು.
ಸಭಾತ್ಯಾಗ: ಸರ್ಕಾರ ಅಂಗವಿಕಲರ ಬಗ್ಗೆ ನಿರ್ಲಕ್ಷ ಧೋರಣೆ ಅನುಸರಿಸುತ್ತಿದೆ. ಬಡವರ ಅಭಿವೃದ್ಧಿಗೆ ಯಾವುದೇ ಯೋಜನೆಗಳನ್ನು ರೂಪಿಸುತ್ತಿಲ್ಲ ಎಂದು ಬಿಜೆಪಿಯ ಇಬ್ಬರು, ಎನ್ಪಿಪಿಯ (ನ್ಯಾಶನಲ್ ಪ್ಯಾಂಥರ್ಸ್ ಪಾರ್ಟಿ) ಒಬ್ಬ ಶಾಸಕರು ಸಭಾತ್ಯಾಗ ಮಾಡಿದರು.